ಪ್ರೀತಿ ನಿರಾಕರಿಸಿದ ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ

Views: 301
ಕನ್ನಡ ಕರಾವಳಿ ಸುದ್ದಿ: ಒನ್ಸೈಡ್ ಲವ್ ಮತ್ತು ವೈಯಕ್ತಿಕ ದ್ವೇಷದಿಂದ ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಸಲೆನ್ಸ್ ಸ್ಕೂಲ್ನ ವಿದ್ಯಾರ್ಥಿ ತನ್ನ ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ನಡೆದಿದೆ.18 ವರ್ಷದ ಸೂರ್ಯಾಂಶ್ ಕೊಚಾರ್ 26 ವರ್ಷದ ಅತಿಥಿ ಶಿಕ್ಷಕಿಗೆ ಸೋಮವಾರ ಬೆಂಕಿ ಹಚ್ಚಿದ್ದಾನೆ. ಶಿಕ್ಷಕಿಯು ಆತನ ವಿರುದ್ಧ ದೂರು ನೀಡಿದ್ದರ ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 18ರಂದು ಅಪರಾಹ್ನ 3:30ರ ಸುಮಾರಿಗೆ, ಸೂರ್ಯಾಂಶ್ ಶಿಕ್ಷಕಿಯ ನಿವಾಸಕ್ಕೆ ಪೆಟ್ರೋಲ್ ತುಂಬಿದ ಬಾಟಲಿಯೊಂದಿಗೆ ತೆರಳಿದ್ದಾನೆ. ಏಕಾಏಕಿ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಶೇ. 10-15ರಷ್ಟು ಸುಟ್ಟ ಗಾಯಗಳಾಗಿದ್ದ ಶಿಕ್ಷಕಿಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗಳು ಗಂಭೀರವಾದರೂ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.
ಸೂರ್ಯಾಂಶ್ ಮತ್ತು ಶಿಕ್ಷಕಿಯು ಎರಡು ವರ್ಷಗಳಿಂದ ಪರಿಚಿತರಾಗಿದ್ದರು. ಯುವಕ ಶಿಕ್ಷಕಿಯ ಮೇಲೆ ಒನ್ಸೈಡ್ ಲವ್ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಆತನನ್ನು ಶಾಲೆಯಿಂದ ಉಚ್ಛಾಟಿಸಲಾಗಿತ್ತು. ಈಗ ಆ ಯುವಕ ಬೇರೊಂದು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕಿಯ ಸೀರೆಯ ಬಗ್ಗೆ ಸೂರ್ಯಾಂಶ್ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದು, ಈ ಬಗ್ಗೆ ಶಿಕ್ಷಕಿ ದೂರು ನೀಡಿದ್ದರು. ಇದು ಅವನ ಕೋಪಕ್ಕೆ ಕಾರಣವಾಯಿತು ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಮನೋಜ್ ಗುಪ್ತಾ ಹೇಳಿದ್ದಾರೆ.
ಇದು ಒನ್ಸೈಡ್ ಲವ್ ಮತ್ತು ವೈಯಕ್ತಿಕ ದ್ವೇಷದ ಪ್ರಕರಣ ಎಂದು ಗುಪ್ತಾ ತಿಳಿಸಿದ್ದಾರೆ. ಘಟನೆಯ ಕೆಲವೇ ಗಂಟೆಗಳಲ್ಲಿ ಕೊತ್ವಾಲಿ ಪೊಲೀಸರು ಸೂರ್ಯಾಂಶ್ನನ್ನು ಡೊಂಗರಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣ್ಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.