ಕುಂದಾಪುರ: ಹಿರಿಯ ಮೀನುಗಾರ ಮುಖಂಡ ಮುತ್ತಯ್ಯ ಖಾರ್ವಿ ನಿಧನ
Views: 30
ಕನ್ನಡ ಕರಾವಳಿ ಸುದ್ದಿ: ಹಿರಿಯ ಮೀನುಗಾರ ಮುಖಂಡ, ಸಮಾಜ ಸೇವಕ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಮೀನುಗಾರ ಸಮಾಜದ ಮುಖಂಡ ಕೆ. ಮುತ್ತಯ್ಯ ಖಾರ್ವಿ (67) ಉಪ್ಪುಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಸೋಮವಾರ ನಿಧನರಾಗಿದ್ದಾರೆ
ಕರ್ನಾಟಕ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಕಾರ್ಯದರ್ಶಿಯಾಗಿ, ಭಾರತೀಯ ಜನತಾ ಪಾರ್ಟಿ ಮುಖಂಡರಾಗಿ, ಉಪ್ಪುಂದ ಪಂಚಾಯತ್ ಉಪಾಧ್ಯಕ್ಷರಾಗಿ, ನಾಡ ದೋಣಿ ಮೀನುಗಾರರ ಸಂಘ ಬೈಂದೂರು ವಲಯದ ಅಧ್ಯಕ್ಷರಾಗಿ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಓಲಗ ಮಂಟಪದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಮಾಜದ ಹಿತವನ್ನೇ ಧೈಯವನ್ನಾಗಿಸಿಕೊಂಡು ನಿಸ್ವಾರ್ಥ ಸಮಾಜಸೇವೆ ಹಾಗೂ ಶುದ್ಧರಾಜಕೀಯದ ಪ್ರತೀಕರಾಗಿದ್ದವರು. ಅದೆಷ್ಟು ಮೀನುಗಾರರು ಅನಾರೋಗ್ಯ ಸಮಯದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆಯನ್ನು ದೊರಕಿಸುವಲ್ಲಿ ಇವರ ಸೇವೆ ಅಮೂಲ್ಯವಾದದ್ದು.
ಎಲ್ಲರನ್ನು ಒಗ್ಗೂಡಿ-ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ “ಅಜಾತ ಶತ್ರು” ಎಂಬ ಬಿರುದಿಗೆ ತಕ್ಕವರು. ಸಮಾಜದ ಎಲ್ಲರ ಜತೆ ಬೆರೆತು ಜನಪ್ರಿಯ ನಾಯಕ ಅಷ್ಟೇ ಅಲ್ಲ ಎಲ್ಲರನ್ನೂ ಒಳಗೊಳ್ಳುವ ಜನರಪ್ರೀತಿಯ ನಾಯಕನಾದವರು. ಸಮಾಜದ ಕುರಿತು ದೂರದೃಷ್ಟಿ ಹೊಂದಿದ ಕಾಯಕಜೀವಿ. ಶಿಕ್ಷಣ, ಸಂಘಟನೆ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಪ್ರತಿನಿಧಿತ್ವದ ಯಶಸ್ವಿ ರೂವಾರಿ.






