ಭಜನೆ ಮಾಡುವಾಗ ಕಿಟಕಿ ಪಕ್ಕದಲ್ಲಿ ಕುಳಿತ ಮಹಿಳೆಯ ಚಿನ್ನದ ಸರ ಎಳೆದು ಪರಾರಿ: ದೂರು ದಾಖಲು

Views: 250
ಬೆಂಗಳೂರು: ಭಜನೆ ಮಾಡುವಾಗ ಕಿಟಕಿ ಪಕ್ಕದಲ್ಲಿ ಕುಳಿತುಕೊಂಡಿದ್ದ ಮಹಿಳೆಯ ಚಿನ್ನದ ಸರ ಕಳ್ಳತನವಾಗಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಶಂಕರ ನಗರದ 2ನೇ ಕ್ರಾಸ್ 10ನೇ ಮುಖ್ಯ ರಸ್ತೆಯಲ್ಲಿದ್ದ ಗಣೇಶ ದೇಗುಲದಲ್ಲಿ ನಡೆದಿದೆ. ಸರ ಕಳೆದುಕೊಂಡ ಮಂಗಳಾ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸರಗಳ್ಳತನ ಮಾಡಿದ ವಿಡಿಯೊ ಭಕ್ತರೊಬ್ಬರ ಮೊಬೈಲ್ನಲ್ಲಿ ಸೆರೆ ಕೂಡ ಆಗಿದೆ.
ಶಂಕರನಗರದ ನಿವಾಸಿಯಾಗಿರುವ ಮಂಗಳಾ ಪತಿ ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಎಂದಿನಂತೆ ಸಂಜೆ 6.30ರ ಸುಮಾರಿಗೆ ದೇಗುಲಕ್ಕೆ ಮಂಗಳಾ ಅವರು ಬಂದಿದ್ದರು. ಎಲ್ಲರೊಂದಿಗೆ ಸೇರಿ ಕಿಟಕಿ ಪಕ್ಕದಲ್ಲಿ ಕುರ್ಚಿಯಲ್ಲಿ ಕುಳಿತು ಭಜನೆ ಮಾಡುತ್ತಿದ್ದರು.ಈ ವೇಳೆ ಕಳ್ಳನೊಬ್ಬ ಹೊರಗಿನ ಕಿಟಕಿಯಿಂದ ಕೈ ಹಾಕಿ ಮಂಗಳಾ ಕುತ್ತಿಗೆಯಲ್ಲಿದ್ದ ಸರ ಕಸಿದಿದ್ದಾರೆ. ಬಿಗಿಯಾಗಿ ಹಿಡಿದುಕೊಂಡಿದ್ದ ಪರಿಣಾಮ 70 ಗ್ರಾಂ ಸರ ತುಂಡಾಗಿ 30 ಗ್ರಾಂ ಸರ ಖದೀಮನ ಪಾಲಾಗಿದೆ. ಭಕ್ತರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.






