ಧಾರ್ಮಿಕ

ವಕ್ವಾಡಿ ಮಾಗಣಿ ಸಭೆಯಲ್ಲಿ ಬಾರ್ಕೂರು ದೇಗುಲದ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರರಿಗೆ ಸನ್ಮಾನ 

Views: 275

ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೂಡುಕಟ್ಟಿಗೆ ಸೇರಿದ ವಕ್ವಾಡಿ ಮಾಗಣೆಯ ಸಭೆಯಲ್ಲಿ ದೇಗುಲದ ಆಡಳಿತ ಮೊಕ್ತೇಸರರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅವರನ್ನು ಸನ್ಮಾನಿಸಲಾಯಿತು.

ವಕ್ವಾಡಿ ಮಾಗಣೆಯ ವ್ಯಾಪ್ತಿಗೆ ಸೇರಿದ ಕುಂಭಾಶಿ, ಗೋಪಾಡಿ, ಹೂವಿನಕೆರೆ, ಅಸೋಡು, ಕೋಟೇಶ್ವರ, ಕಾಳಾವರ, ನೂಜಿ, ಹೆಸ್ಕುತ್ತೂರು, ಇದರ ಸಭೆಯು ಹೂವಿನಕೆರೆ ಭಾವಿಸಮೀರ ಗುರು ಸಾರ್ವಭೌಮ ವಾದಿರಾಜ ಮಠದ ಹತ್ತಿರ ವಾದೀಶ್ ಭಟ್ ಅವರ ಸಭಾಗ್ರಹದಲ್ಲಿ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 13 ರಂದು ನಡೆಯಿತು.

ಸಭೆಯಲ್ಲಿ ಮಾಗಣೆಯ ಕುಟುಂಬದವರಿಗೆ ಮೂಲ ಕ್ಷೇತ್ರದ ಪ್ರಸಾದ ವಿತರಿಸಲಾಯಿತು. ದೇವಸ್ಥಾನದಲ್ಲಿ ನಡೆಯಲಿರುವ ಶಾಶ್ವತ ಪೂಜೆ, ವಿವಿಧ ಪೂಜಾ ಕೈಂಕರ್ಯ, ಜಾತಿ ಗಣತಿ ಮತ್ತು ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿ, ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಜಯರಾಮ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್.ಎ. ಗೋಪಾಲ್, ವೀರೇಶ್ವರ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿಗಾರ್ ಮಣಿಪಾಲ್, ಸಂಘಟನಾ ಸಮಿತಿಯ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ ಸಂತೆಕಟ್ಟೆ, ಯುವ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸಾಸ್ತಾನ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಾವತಿ ಸದಾಶಿವ ಶೆಟ್ಟಿಗಾರ ಬ್ರಹ್ಮಾವರ, ನಾರಾಯಣ ಶೆಟ್ಟಿಗಾರ ಸುರತ್ಕಲ್, ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ ಶೆಟ್ಟಿಗಾರ್ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ, ನಿವೃತ್ತ ಮುಖ್ಯ ಶಿಕ್ಷಕ ಶೀನ ಶೆಟ್ಟಿಗಾರ ವಕ್ವಾಡಿ, ನಿವೃತ್ತ ಮುಖ್ಯ ಶಿಕ್ಷಕ ಮಹಾಬಲ ಶೆಟ್ಟಿಗಾರ ದೇವುಮನೆ, ರವೀಂದ್ರ ಶೆಟ್ಟಿಗಾರ ಹೂವಿನಕೆರೆ, ಗುರಿಕಾರರಾದ ಶ್ರೀನಿವಾಸ ಶೆಟ್ಟಿಗಾರ ಕೊಳಂಬೆ, ಸಹ ಮೊಕ್ತೇಸರರಾದ ಯಡಾಡಿ ಮಹಾಬಲ ಶೆಟ್ಟಿಗಾರ, ಕಾಳಾವರ ಗಣಪಯ್ಯ ಶೆಟ್ಟಿಗಾರ, ನಿವೃತ್ತ ಆಹಾರ ನಿರೀಕ್ಷಕ ಚಂದ್ರಶೇಖರ್ ಶೆಟ್ಟಿಗಾರ್, ಬಾರ್ಕೂರು ದೇಗುಲದ ಆಡಳಿತ ಮಂಡಳಿಯ ಸಹ ಮೊಕ್ತೇಸರರು, ಗುರಿಕಾರರು, ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಕ್ವಾಡಿ ಮಾಗಣೆಯಿಂದ ಬಾರ್ಕೂರು ಕುಲ ದೇವಸ್ಥಾನದ ವಿವಿಧ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಹಾಗೂ ಇತ್ತೀಚೆಗೆ ಬಾರ್ಕೂರಿನಲ್ಲಿ ಸಂಪನ್ನಗೊಂಡ ಬ್ರಹ್ಮಕಲಶೋತ್ಸವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರನ್ನು ಗೌರವಿಸಲಾಯಿತು.

ಸುಧಾಕರ ವಕ್ವಾಡಿ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಡಾ.ಶಿವಪ್ರಸಾದ ಶೆಟ್ಟಿಗಾರ ಕಾರ್ಯಕ್ರಮ ನಿರೂಪಿಸಿದರು.ಸಹ ಮೊಕ್ತೇಸರ ಜನಾರ್ದನ ಶೆಟ್ಟಿಗಾರ ವಂದಿಸಿದರು.

Related Articles

Back to top button
error: Content is protected !!