ಹೃದಯಾಘಾತದಿಂದ ನಿಧನರಾದ ಕುಂದಾಪುರ ಕಂಡ್ಲೂರು ಠಾಣೆಯ ಪಿಎಸ್ಐ ನಾಸೀರ್ ಹುಸೇನ್ ಅಂತ್ಯಕ್ರಿಯೆ
Views: 126
ಕನ್ನಡ ಕರಾವಳಿ ಸುದ್ದಿ: ಭಾನುವಾರ ನಿಧನರಾಗಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ, ಮಾಜಿ ಯೋಧ ನಾಸೀರ್ ಹುಸೇನ್ ಅವರ ಅಂತ್ಯಕ್ರಿಯೆ ಸೊಮವಾರ ಬೆಳಿಗ್ಗೆ ತಾಲ್ಲೂಕಿನ ಗೋಣಿಬೀಡಿನ ಖಬರಸ್ತಾನದಲ್ಲಿ ಮುಸ್ಲಿಂ, ಸಂಪ್ರದಾಯದಂತೆ ನಡೆಯಿತು.
ಭಾನುವಾರ ತಡರಾತ್ರಿ ಕೊಟ್ಟಿಗೆಹಾರ ಮೂಡಿಗೆರೆ ಪಟ್ಟಣಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು.ಪಟ್ಟಣದ ಅಮರ್ ಜವಾನ್ ಸ್ಮಾರಕದ ಎದುರು ಕೆಲಕಾಲ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.
ಮಾಜಿ ಸೈನಿಕರ ಸಂಘದ ವತಿಯಿಂದ ತ್ರಿವರ್ಣ ಧ್ವಜ ಹೊದಿಸಿ ನಾಸೀರ್ ಹುಸೇನ್ ಪಾರ್ಥಿವ ಶರೀರಕ್ಕೆ ಗೌರವರಕ್ಷೆ ಸಲ್ಲಿಸಿದರು. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ನಂತರ ಅಲ್ಲೂರಿಗೆ ಮೃತದೇಹವನ್ನು ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ರಾತ್ರಿ 11.30ಕ್ಕೆ ಗೋಣಿಬೀಡಿನ ನಾಸೀರ್ ಮನೆಗೆ ತರಲಾಯಿತು. ಬೆಳಿಗ್ಗೆ 9ಕ್ಕೆ ಗೋಣಿಬೀಡು ಗ್ರಾಮ ಪಂಚಾಯಿತಿ ಕಚೇರಿ ಎದುರಿನ ವೃತ್ತದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಪೊಲೀಸರು 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ನಂತರ ಈದ್ದಾ ಮೈದಾನಕ್ಕೆ ಕೊಂಡೊಯ್ದು ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥನೆ ನಡೆಸಲಾಯಿತು. ಬಳಿಕ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಯಿತು.
ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಗಫೂರ್, ಡಿವೈಎಸ್ಪಿ ನಾಗರಾಜ್, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕ್ಯಾಪ್ಟನ್ ಮಂಜುನಾಥ್, ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ ಸಂತೋಷ್ ಕಾಯ್ಕಿಣಿ, ರಾಘವೇಂದ್ರ, ಹರೀಶ್, ಮಂಜನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.






