ಕುಂದಾಪುರ: ಕೋಡಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆ, ಮೂವರು ಮಕ್ಕಳ ರಕ್ಷಣೆ
Views: 78
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಕೋಡಿ ಸೀವಾಕ್ ಸಮೀಪ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆ ಹಾಗೂ ಮೂವರು ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.
ಮೂವರು ಎಳೆಯ ಮಕ್ಕಳೊಂದಿಗೆ ದುಃಖಿತರಾಗಿ ನಿಂತಿದ್ದ ಮಹಿಳೆಯನ್ನು ಗಮನಿಸಿದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಸ್ಐ ಮುಕ್ತಾ ಬಾಯಿ ಮತ್ತು ಕೋಡಿ ಬೀಟ್ ಸಿಬಂದಿ ಗೋಪಾಲ ಖಾರ್ವಿ ಅವರು ಗಮನಿಸಿ ವಿಚಾರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಗನಹಳ್ಳಿಯ ಕೊಳೆಗೇರಿ ನಿವಾಸಿ ಬದ್ರೇಶ್ ಅವರ ಪತ್ನಿ ಸಂಗೀತಾ (27) ಹಾಗೂ 9 ವರ್ಷದ ಪುತ್ರ, 8 ಹಾಗೂ 5 ವರ್ಷದ ಪುತ್ರಿಯರೊಂದಿಗೆ ಅಲೆಮಾರಿ ಜೀವನ ನಡೆಸುತ್ತಿರುವ ವಿಚಾರ ತಿಳಿಯಿತು. ಮಹಿಳೆ ತನ್ನ ಮತ್ತು ಮಕ್ಕಳ ಜೀವನದ ಭವಿಷ್ಯಕ್ಕಾಗಿ ಸಹಾಯ ಯಾಚಿಸಿದರು.
ಬಳಿಕ ಪೊಲೀಸರು ಕೋಡಿಯ ಸಮಾಜ ಸೇವಕ ಅಶೋಕ್ ಪೂಜಾರಿ ಅವರ ಸಹಕಾರದೊಂದಿಗೆ ಮಕ್ಕಳನ್ನು ಉಡುಪಿ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನಕ್ಕೆ ದಾಖಲು ಮಾಡಿದರು. ತಾಯಿ ಸಂಗೀತಾಗೆ ಆಶ್ರಯ ಮತ್ತು ಕೆಲಸ ಕೊಡಲು ಕೋಡಿ ಸೀ ವಾಕ್ ರೆಸ್ಟೊ ಕೆಫೆಯ ಮಾಲಕರಾದ ಜ್ಯೋತಿ ಮತ್ತು ವಿಕಾಸ್ ದಂಪತಿ ಮುಂದೆ ಬಂದಿದ್ದಾರೆ. ಅದರಂತೆ ಮಹಿಳೆಯನ್ನು ಆಕೆಯ ಒಪ್ಪಿಗೆಯ ಮೇರೆಗೆ ಅವರ ಜತೆಯಲ್ಲಿ ಇರಲು ಅವಕಾಶ ಕಲ್ಪಿಸಿದರು.






