ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಸಂಕಷ್ಟಹರ ಚತುರ್ಥಿ: ಹರಿದುಬಂದ ಭಕ್ತ ಸಮೂಹ
Views: 18
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ರವಿವಾರ ಸಂಕಷ್ಟಹರ ಚತುರ್ಥಿ, ಸಹಸ್ರನಾರಿಕೇಳ ಗಣಪತಿ ಯಾಗ, ಸತ್ಯಗಣಪತಿ ವ್ರತ, ಮಹಾ ಪೂಜೆ ಹಾಗೂ ಅನ್ನಸಂತರ್ಪಣೆಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಕಷ್ಟಹರ ಚತುರ್ಥಿಗೆ ಮುಂಜಾನೆಯಿಂದಲೇ ಜಿಲ್ಲೆಯ ಮೂಲೆ ಮೂಲೆಯಿಂದಲೂ 20 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಐದು ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ ಎಂದು ಆಡಳಿತ ಧರ್ಮದರ್ಶಿಗಳು ತಿಳಿಸಿದ್ದಾರೆ.
ಅಪರಾಹ್ನ ನೇರಂಬಳ್ಳಿಯ ಪ್ರಾಣೇಶ ತಂತ್ರಿ ಸಹೋದರಿಯರಿಂದ ಜಯಶ್ರೀ ಹಾಗೂ ಶಾಸ್ತ್ರೀಯ ಭಕ್ತಿ ಸಂಗೀತ, ಸಂಜೆ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದ ಹಾಗೂ ಸಿದ್ದಾಪುರದ ಯಕ್ಷ ನುಡಿಸಿರಿ ಬಳಗ ಇವರಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ ‘ಸಮರ ಸನ್ನಾಹ’ ಪ್ರದರ್ಶನಗೊಂಡಿತು.
ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀರಮಣ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ. ಸೂರ್ಯ ನಾರಾಯಣ ಉಪಾಧ್ಯಾಯ, ಧರ್ಮದರ್ಶಿಗಳಾದ ಕೆ. ಪದ್ಮನಾಭ ಉಪಾಧ್ಯಾಯ, ನಿರಂಜನ್ ಉಪಾಧ್ಯಾಯ, ಆಡಳಿತ ಹಾಗೂ ಅರ್ಚಕ ಮಂಡಳಿಯ ಸದಸ್ಯರು ಮತ್ತು ಸಿಬಂದಿ ಉಪಸ್ಥಿತರಿದ್ದರು.






