ತೋಟದ ಮನೆಯಲ್ಲಿ ಯುವ ವಕೀಲೆ ಜತೆಗೆ ಯುವಕನ ಶವ ಪತ್ತೆ, ಸಾವಿನ ಸುತ್ತಲೂ ಅನುಮಾನ!

Views: 145
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನೆಲಮಂಗಲದ ಶ್ರೀನಿವಾಸಪುರದ ತೋಟದ ಮನೆಯಲ್ಲಿ ಇಬ್ಬರ ಶವಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ವಕೀಲೆ ರಮ್ಯಾ (27) ಹಾಗೂ ಪುನೀತ್ ಎನ್ನುವ ಯುವಕನ ಮೃತದೇಹಗಳು ಪತ್ತೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಏಪ್ರಿಲ್ 24 ರ ಸಂಜೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬೇರೆ ಬೇರೆ ಆಯಾಮಾಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
27 ವರ್ಷದ ರಮ್ಯಾ ಮೃತದೇಹ ನೆಲಮಂಗಲದ ಶ್ರೀನಿವಾಸಪುರದ ತೋಟದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ವಕೀಲೆ ರಮ್ಯಾ ಮನೆಯಲ್ಲಿ ವಾಸವಿದ್ದ ಪುನೀತ್ ಎಂಬಾತನ ಮೃತದೇಹ ಕೆಂಪಲಿಂಗನಹಳ್ಳಿಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿಗೆ ಕಾರಣ ನಿಗೂಢವಾಗಿದೆ. ಮರಣೋತ್ತರ ಪರೀಕ್ಷೆಗೆ ಮೃತ ದೇಹ ನೆಲಮಂಗಲ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಮ್ಯಾ ಸಾವಿನ ಸುತ್ತಲೂ ಅನುಮಾನಗಳು ಹುಟ್ಟಿಕೊಂಡಿದ್ದು, ಕುಟುಂಬಸ್ಥರು
ಉದ್ಯಮಿ ದಿನೇಶ್ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಕುಟುಂಬಸ್ಥರ ದೂರಿನ ಮೇರೆಗೆ ಕೊಲೆ ಆರೋಪದ (103) ಅಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಸಾವಿಗೂ ಮೊದಲು ರಮ್ಯಾ, ಮಾವನಿಗೆ ದಿನೇಶ್ ಹಾಗೂ ಕುಟುಂಬವನ್ನ ಬಿಡಬೇಡಿ ನನ್ನ ಸಾವಿಗೆ ಇವರೆ ಕಾರಣ ಅಂತ ವಾಯ್ಸ್ ಮೆಸೇಜ್ ಮೂಲಕ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮ್ಯಾ ಸಾವಿಗೆ ನೆಲಮಂಗಲ ಬಸವನಹಳ್ಳಿಯ ಉದ್ಯಮಿ ದಿನೇಶ್ ಎಂಬಾತ ಕಾರಣ ಎಂದು ತಿಳಿಸಲಾಗಿದೆ. ಅರೋಪಿ ದಿನೇಶ್ ಗ್ರಾನೈಟ್ ವ್ಯವಹಾರ ಮಾಡುತ್ತಿದ್ದ ಉದ್ಯಮಿ, ರಮ್ಯಾ ತಾಯಿ ಸಮಾಧಿ ನಿರ್ಮಾಣ ಸಂದರ್ಭದಲ್ಲಿ ದಿನೇಶ್ ಪರಿಚಯವಾಗಿತ್ತು. ಆದರೆ ಇವರ ಸಂಬಂಧ ಯಾವ ರೀತಿಯಲ್ಲಿ ಇತ್ತು ಅನ್ನುವುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಶೆಡ್ ಬಳಿ ಬಂದು ಕೊಲೆ ಮಾಡಿ ಪರಾರಿಯಾದ ಶಂಕೆ ಇದೆ. ಇದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.