ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರಕೂರಿನಲ್ಲಿ ವಧು- ವರಾನ್ವೇಷಣಾ ಸಮಾವೇಶ
ವಧು-ವರಾನ್ವೇಷಣಾ ಮುಖಾಮುಖಿಯಲ್ಲಿ ವಧು-ವರರ ಸ್ವ-ವಿವರ ಮಾಹಿತಿಯನ್ನು ವಿವಾಹ ಅಪೇಕ್ಷಿತರಿಗೆ ಮಾತ್ರ ಸಿಗುವಲ್ಲಿ ಡಿಜಿಟಲ್ ತಂತ್ರಗಾರಿಕೆ ಆಪ್ ಮೂಲಕ ಮಾಹಿತಿ ನೀಡಲಾಗಿತ್ತು.ಎಲ್ಲಿಯೂ ವಧು-ವರರ ಮಾಹಿತಿ ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡುವ ತಂತ್ರಗಾರಿಕೆ ಇದಾಗಿತ್ತು.ಈ ತಂತ್ರಗಾರಿಕೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Views: 25
ಬ್ರಹ್ಮಾವರ: ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಾರಕೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ( ರಿ) ಮಂಗಳೂರು ಇವರ ಸಹಯೋಗದೊಂದಿಗೆ ಮೂಲ ಕ್ಷೇತ್ರ ಬಾರಕೂರಿನಲ್ಲಿ ನ.1ರಂದು ಕರಾವಳಿ ಪದ್ಮಶಾಲಿ/ಶೆಟ್ಟಿಗಾರ್ ವಧು ವರಾನ್ವೇಷಣಾ ದ್ವಿತೀಯ ಸಮಾವೇಶ ನಡೆಯಿತು.
ದೇವಳದ ಅಭಿವೃದ್ಧಿಯ ಸಮಿತಿಯ ಅಧ್ಯಕ್ಷ ಬಾರಕೂರು ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ ಅವರು ಸಮಾವೇಶವನ್ನು ಉದ್ಘಾಟಿಸಿ, ಮಾತನಾಡಿದ ಅವರು ವಯಸ್ಸು, ವಿದ್ಯಾರ್ಹತೆ, ಉದ್ಯೋಗ, ಇನ್ನಿತರ ವಿಷಯಗಳಿಂದಾಗಿ ತಮ್ಮ ಅಪೇಕ್ಷೆಯ ವಧು ವರಾನ್ವೇಷಣೆ ಫಲಕಾರಿಯಾಗದೆ ಇರುದರಿಂದ ಕೌಟುಂಬಿಕ, ಸಾಮಾಜಿಕ ಕಾರ್ಯಗಳಿಂದ ದೂರ ಉಳಿದುಕೊಂಡು ನಿರಾಶೆ ಭಾವನೆಗೆ ಕಾರಣವಾಗಿದೆ. ಈ ಮೂಲಕ ವಿವಾಹ ಅಪೇಕ್ಷಿತ ಎಲ್ಲರಿಗೂ ಕಂಕಣ ಕೂಡಿ ಬರಲಿ ಎಂದು ಶುಭ ಹಾರೈಸಿದರು.

ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು ಇದರ ಅಧ್ಯಕ್ಷರಾದ ರಾಮದಾಸ ಶೆಟ್ಟಿಗಾರ್ ಪಣಿಯಾಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಆದ್ಯತೆ ಬಂದಮೇಲೆ ಪುರುಷ ಪ್ರಧಾನ ಸಮಾಜದಲ್ಲಿ ಇತ್ತೀಚೆಗೆ ಸ್ತ್ರೀಯರೆ ಹೆಚ್ಚು ಪ್ರಬಲರಾಗಿದ್ದಾರೆ.ಈ ಹಿನ್ನಲೆಯಲ್ಲಿ ನಾನು ಎಂಬ ಭಾವನೆ, ಕೀಳರಿಮೆಯಿಂದ ಹೊರಗೆ ಬಂದಾಗ ನಂಬಿಕೆ, ಹೊಂದಾಣಿಕೆಯಿಂದ ಸುಮಧುರ ಸಾಮರಸ್ಯ ಸಮಾಜ ಬೆಳೆಯಲು ಸಾಧ್ಯ ಎಂದರು.

ದೇವಾಲಯದ ಆಡಳಿತ ಮೊಕ್ತೇಸರ ರಾದ ಡಾ. ಸಿ ಜಯರಾಮ್ ಶೆಟ್ಟಿಗಾರ್ ಅವರು ವಿವಾಹ ಅಪೇಕ್ಷಿತರಿಗೆ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮದುವೆ ವಂಚಿತ ಕುಟುಂಬದಲ್ಲಿ ಶಾಂತಿ ನೆಮ್ಮದಿಯಿಂದ ವಂಚಿತರಾಗಿ ಕೌಟುಂಬಿಕ ಮತ್ತು ಸಾಮಾಜಿಕ ಸಾಮರಸ್ಯ ಬಾಳ್ವೆಗೆ ತೊಡಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪದ್ಮಶಾಲಿ ವಧು ವರಾನ್ವೇಷಣ ಸಮಾವೇಶದ ಪ್ರಧಾನ ಸಂಚಾಲಕರಾದ ಎಚ್ಎ ಗೋಪಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುಲ ವಧು-ವರರು ಜೀವನೋದ್ದೇಶ ಸಾಧನೆಗಾಗಿ ಸಕಾಲದಲ್ಲಿ ದಾಂಪತ್ಯ ಜೀವನ ಪ್ರವೇಶಿಸಬೇಕು. ಸದ್ಯ ವಧು25 ವರ್ಷ ವರ 30 ವರ್ಷದೊಳಗೆ ಈ ಗುರಿ ಸಾಧಿಸಿದರೆ ಜೀವನ ಪರಿಪೂರ್ಣತೆಗೊಂಡು ಸಾರ್ಥಕತೆ ಕಾಣಬಹುದು. ವರ ಉತ್ತಮ ವಿದ್ಯೆ ಗಳಿಸಿ ಉದ್ಯೋಗ ಹೊಂದಿಯೂ ವಧು ಆರ್ಥಿಕ ಸಬಲತೆಗೆ ತಕ್ಕ ವಿದ್ಯೆ ಹೊಂದಿ ಅಹಂಕಾರ ನಿಯಂತ್ರಿಸಿ ಈ ಸಾಧನೆ ಮಾಡಿಕೊಂಡು ಸಮರಸ ಬಾಳ್ವೆಯ ಸಮಾಜೋದ್ಧಾರಕ್ಕೆ ಸಿದ್ದರಾಗಿ ಎಂದು ವಿವಾಹ ಅಪೇಕ್ಷಿತರಿಗೆ ಕರೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ( ರಿ) ಮಂಗಳೂರು ಇದರ ಪರಿಣಯ ವೇದಿಕೆಯ ಸಂಚಾಲಕರು ಜಯರಾಮ್ ಮಣಿಪಾಲ್ ಸಂದರ್ಭೋಚಿತವಾಗಿ ಮಾತನಾಡಿ, ಉತ್ತಮ ದಾಂಪತ್ಯ ಜೀವನಕ್ಕೆ ಪತಿ-ಪತ್ನಿಯರು ಅನ್ಯೋನ್ಯವಾಗಿರಬೇಕು. ಈ ನಿಟ್ಟಿನಲ್ಲಿ ಸಮಾಜವು ವಿವಾಹ ಅಪೇಕ್ಷಿತ ಯುವಕ- ಯುವತಿಯರನ್ನು ಹಾಗೂ ಅವರ ಕುಟುಂಬಿಕರನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಾಗ ಉತ್ತಮ ಸಂಬಂಧಗಳು ಕೂಡಿ ಬರಲು ಸಾಧ್ಯ ಎಂದರು.

ವಧು-ವರಾನ್ವೇಷಣೆಯಲ್ಲಿ ಡಿಜಿಟಲ್!
ವಧು-ವರಾನ್ವೇಷಣಾ ಮುಖಾಮುಖಿಯಲ್ಲಿ ವಧು-ವರರ ಸ್ವವಿವರ ಮಾಹಿತಿಯನ್ನು ವಿವಾಹ ಅಪೇಕ್ಷಿತರಿಗೆ ಮಾತ್ರ ಸಿಗುವಲ್ಲಿ ಡಿಜಿಟಲ್ ತಂತ್ರಗಾರಿಕೆ ಆಪ್ ಮೂಲಕ ಮಾಹಿತಿ ನೀಡಲಾಗಿತ್ತು.ಎಲ್ಲಿಯೂ ವಧು-ವರರ ಮಾಹಿತಿ ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡುವ ತಂತ್ರಗಾರಿಕೆ ಇದಾಗಿತ್ತು.ಈ ತಂತ್ರಗಾರಿಕೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಈ ತಂತ್ರಗಾರಿಕೆಯ ಕರ್ತರಾದ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕರಾವಳಿ ಕರ್ನಾಟಕದ ಶೆಟ್ಟಿಗಾರ್/ ಪದ್ಮಶಾಲಿಗರು ಆರಾಧಿಸಿಕೊಂಡ ಬಂದಿರುವ 16 ದೇವಸ್ಥಾನದ ವ್ಯಾಪ್ತಿಯಿಂದ 316 ವಿವಾಹ ಅಪೇಕ್ಷಿತ ವಧು-ವರರು ನೋಂದಾಯಿಸಿಕೊಂಡು ಹಾಜರಿದ್ದ ಕುಟುಂಬದವರು ಮುಖಾಮುಖಿಯಾಗಿ ಮಾತುಕತೆ ನಡೆಸಿದರು.
ಸಮಾವೇಶದಲ್ಲಿ ಕರಾವಳಿ ಕರ್ನಾಟಕದ ಹದಿನಾರು ದೇವಸ್ಥಾನದ ಪ್ರತಿನಿಧಿಗಳು, ಗುರಿಕಾರರು, 13 ಪ್ರಾದೇಶಿಕ ವಲಯ ಸಂಘದವರು ದುಬೈ ಪದ್ಮಶಾಲಿ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ ಮುಂಬೈ, ಬೆಂಗಳೂರು ಪದ್ಮಶಾಲಿ ಸಂಘದವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು.

ಸಮಾವೇಶದ ಕಾರ್ಯನಿರ್ವಾಹಕ ಸಂಚಾಲಕರಾದ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಅವರು ಸ್ವಾಗತಿಸಿದರು. ಸಹ-ಸಂಚಾಲಕ ಸುಧಾಕರ ವಕ್ವಾಡಿ ಕಾರ್ಯಕೃಮ ನಿರೂಪಿಸಿದರು. ಸಹ ಸಂಚಾಲಕ ಭಾಸ್ಕರ್ ಶೆಟ್ಟಿಗಾರ ಸಾಸ್ತಾನ ವಂದಿಸಿದರು. ಕು.ಅದಿತಿ, ಸುಶ್ಮಿತ ವಿವೇಕ ಅತಿಥಿಗಳನ್ನು ಗೌರವಿಸಿದರು.






