ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಪ್ರೀತಿಸುತ್ತಿದ್ದ ಹುಡುಗನ ಜೊತೆ ನಿಂತು “ಇವನೇ ನನ್ನ ಜೀವ ಎಂದ ವಧು”..!
Views: 126
ಕನ್ನಡ ಕರಾವಳಿ ಸುದ್ದಿ: ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮಂಟಪದಿಂದ ಎದ್ದು, ತಾನು ಪ್ರೀತಿಸುತ್ತಿದ್ದ ಹುಡುಗನ ಪಕ್ಕದಲ್ಲಿ ನಿಂತು, ಇವನೇ ನನ್ನ ಜೀವ ಎಂದ ಯುವತಿಯ ಮಾತುಗಳು ಇಡೀ ಮಂಟಪದಲ್ಲಿದ್ದವರನ್ನು ಅಚ್ಚರಿಗೊಳಿಸಿತು.
ಈ ಘಟನೆ ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ಮೈಲವರಂನಲ್ಲಿ ವರದಿಯಾಗಿದೆ.
ಇವನು ನಮ್ಮೂರಿನವನೇ. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ. ಈ ಮದುವೆ ನನಗೆ ಇಷ್ಟವಿಲ್ಲ ಎಂದು ಎಲ್ಲರ ಮುಂದೆ ಜೋರಾಗಿ ಕೂಗಿ ಹೇಳಿದ್ದಾಳೆ. ಕುಟುಂಬಸ್ಥರು ಆಕ್ರೋಶದಿಂದ ಯುವತಿಯ ಪ್ರಿಯಕರನನ್ನು ಹಿಡಿದು ಥಳಿಸಿದ್ದಾರೆ. ಗಲಾಟೆ ತಾರಕಕ್ಕೇರುತ್ತಿದ್ದಂತೆ ಮಾಹಿತಿ ಮೇರೆಗೆ ಮದುವೆ ಮಂಟಪಕ್ಕೆ ತಕ್ಷಣವೇ ಧಾವಿಸಿದ ಸ್ಥಳೀಯ ಪೊಲೀಸರು, ಜಟಾಪಟಿಯನ್ನು ತಣ್ಣಗಾಗಿಸಿದ್ದಾರೆ. ಈ ವೇಳೆ, ವರನ ಹೆತ್ತವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ನಮಗೆ ಇರುವುದು ಇವನೊಬ್ಬನೆ ಮಗ. 20 ಲಕ್ಷ ರೂ. ಖರ್ಚು ಮಾಡಿ ಅದ್ದೂರಿಯಾಗಿ ಮಂಟಪದಲ್ಲಿ ಮದುವೆಗೆ ತಯಾರಿ ಮಾಡಿದ್ವಿ. ಸಾವಿರಾರೂ ಮಂದಿಗೆ ಊಟಕ್ಕೂ ವ್ಯವಸ್ಥೆ ಮಾಡಿದ್ದೆವು. ಕೊನೆಯ ಕ್ಷಣದಲ್ಲಿ ಇವೆಲ್ಲವನ್ನೂ ನೀರಿನಲ್ಲಿ ಹೋಮ ಮಾಡಿದ ಈಕೆ, ಬಂದ ಅತಿಥಿಗಳು, ಸಂಬಂಧಿಕರ ಮುಂದೆ ನಮ್ಮ ಮಾನ-ಮರ್ಯಾದೆ ಕಳೆದಿದ್ದಾಳೆ ಎಂದು ಕಣ್ಣೀರಿಟ್ಟರು.
ಕಡೆಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ, ನಿಶ್ಚಯಗೊಂಡಿದ್ದ ಮದುವೆಯನ್ನು ವಿಧಿಯಿಲ್ಲದೆ ಮುರಿಯಲಾಯಿತು. ಇನ್ನು ವರನ ಕುಟುಂಬಸ್ಥರಿಗೆ ಆದ ನಷ್ಟಕ್ಕೆ ಸಂಬಂಧಿಸಿದಂತೆ ಉದ್ಭವಿಸಿದ ವಿವಾದಗಳನ್ನು ಚರ್ಚಿಸಿ ಬಗೆಹರಿಸಲಾಯಿತು ಎಂದು ವರದಿಯಾಗಿದೆ,






