ಮದುವೆ ಮಂಟಪದಲ್ಲೇ ನಡೆದ ಆಘಾತಕಾರಿ ಘಟನೆಯಿಂದಾಗಿ ಸ್ಮೃತಿ ಮಂಧಾನ ವಿವಾಹ ಸ್ಥಗಿತ!
Views: 280
ಕನ್ನಡ ಕರಾವಳಿ ಸುದ್ದಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮನೆಯಲ್ಲಿ ಸಂಭ್ರಮದ ಸಾಗರವೇ ಹರಿದಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವರು ಹಸೆಮಣೆ ಏರಬೇಕಿತ್ತು. ಆದರೆ, ವಿಧಿ ಆಟವೇ ಬೇರೆಯಾಗಿತ್ತು. ಮದುವೆ ಮಂಟಪದಲ್ಲೇ ನಡೆದ ಆಘಾತಕಾರಿ ಘಟನೆಯಿಂದಾಗಿ ಸ್ಮೃತಿ ಮಂಧಾನ ವಿವಾಹ ಕಾರ್ಯಕ್ರಮವನ್ನು ದಿಢೀರ್ ಮುಂದೂಡಲಾಗಿದೆ.
ಭಾನುವಾರ (ನ.23) ಸ್ಮೃತಿ ಹುಟ್ಟೂರಾದ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅದ್ಧೂರಿ ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಬಾಲಿವುಡ್ ಸಂಗೀತ ಸಂಯೋಜಕ ಹಾಗೂ ದೀರ್ಘಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ಸ್ಮೃತಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು.
ಮದುವೆ ವಿಧಿವಿಧಾನಗಳು ನಡೆಯುತ್ತಿದ್ದ ಸಂದರ್ಭದಲ್ಲೇ, ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡು ಲಘು ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಕಾರ್ಯಕ್ರಮವಿದ್ದ ಸ್ಥಳಕ್ಕೆ ಅಂಬ್ಯುಲೆನ್ಸ್ ಕರೆಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆಯ ಆರೋಗ್ಯ ಹದಗೆಟ್ಟಿದ್ದರಿಂದ ಮದುವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.






