8ನೇ ತರಗತಿ ವಿದ್ಯಾರ್ಥಿನಿಗೆ ಬಲವಂತ ಮದುವೆ ಯತ್ನ: ಮದುವೆ ಮಾಡಲು ಹೊರಟವರ ವಿರುದ್ದ ದಿಟ್ಟತನದಿಂದ ಹೋರಾಡಿದ ಬಾಲಕಿ

Views: 118
ಕನ್ನಡ ಕರಾವಳಿ ಸುದ್ದಿ: 8ನೇ ತರಗತಿ ವಿದ್ಯಾರ್ಥಿನಿಗೆ ಬಲವಂತ ಮದುವೆ ಮಾಡಿಸುವ ಯತ್ನ ನಡೆದಿದ್ದು, ತನ್ನ ಮದುವೆ ಮಾಡಲು ಹೊರಟ ಪಾಲಕರು ಮತ್ತು ಸಂಬಂಧಿಗಳ ವಿರುದ್ಧ ಬಾಲಕಿಯೊಬ್ಬಳು ದಿಟ್ಟತನದಿಂದ ಏಕಾಂಗಿಯಾಗಿ ಹೋರಾಡಿ, ಬಾಲ್ಯ ವಿವಾಹದಿಂದ ಪಾರಾಗಿರುವ ಘಟನೆ ಚಿತ್ರದುರ್ಗದ ಚಳ್ಳಿಕೆರೆಯಲ್ಲಿ ನಡೆದಿದೆ.
ಬಲವಂತವಾಗಿ ಮಾವನ ಮಗನ ಜತೆ ಲಗ್ನ ಮಾಡಲು ಹೊರಟ ಪೋಷಕರು ಹಾಗೂ ಸಂಬಂಧಿಕರ ವಿರುದ್ದ ವಿದ್ಯಾರ್ಥಿನಿ ದಿಟ್ಟತನದಿಂದ ಹೋರಾಡಿದ್ದಲ್ಲದೇ ಬಾಲ್ಯ ವಿವಾಹದಿಂದ ಪಾರಾಗಿದ್ದಾಳೆ. ಜೂ.4ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗ್ರಾಮವೊಂದರ 8ನೇ ತರಗತಿ ವಿದ್ಯಾರ್ಥಿನಿಯನ್ನು ತನ್ನ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಲು ಆಕೆಯ ಪಾಲಕರು ಸಿದ್ದತೆ ನಡೆಸಿದ್ದರು. ದುರಂತ ಎಂದರೆ ಬಾಲ್ಯ ವಿವಾಹದ ಬಗ್ಗೆ ಬಾಲಕಿಗೆ ತಿಳಿದೇ ಇರಲಿಲ್ಲ. ಬಳಿಕ ಮದುವೆ ಮಾಡಿಸುತ್ತಿರುವ ವಿಚಾರ ತನಗೆ ಗೊತ್ತಾಗುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ.
ತಾಳಿ ಕಟ್ಟಿಸಿಕೊಳ್ಳದೇ ದಿಟ್ಟತನ ತೋರಿದ ಬಾಲಕಿ: ಇಡೀ ಕುಟುಂಬದವರು ತನ್ನನ್ನು ಹಿಡಿದು ತಾಳಿ ಕಟ್ಟಿಸಲು ಯತ್ನಿಸಿದರೂ ಬಗ್ಗದ ಬಾಲಕಿ, ಬಾಲ್ಯ ವಿವಾಹದಿಂದ ಪಾರಾಗಿದ್ದಾಳೆ. ಅಲ್ಲದೇ ಮನೆಯಿಂದ ಹೊರ ಓಡಿ ಬಂದು ತಾಳಿ ಕಟ್ಟಿಸುವ ಪ್ರಯತ್ನಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಆಕೆಯ ಸೋದರ ಮಾವ ತಾಳಿಯನ್ನು ಕೈಯಲ್ಲಿ ಹಿಡಿದು ಬಾಲಕಿ ಹಿಂದೆ ಓಡಿರುವ ಘಟನೆ ಕೂಡ ನಡೆದಿದೆ. ತಾಳಿ ಕಟ್ಟಿಸಿಕೊಳ್ಳುವಂತೆ ಬಾಲಕಿ ಮೇಲೆ ಹಲ್ಲೆ ನಡೆಸಲಾಗಿದೆ. ಗ್ರಾಮಸ್ಥರು ಬಿಡಿಸಲು ಬಂದರೆ ಅವರಿಗೂ ದಬಾಯಿಸಿ ರೋಪ್ ಹಾಕಿ ಮುಗಿಬಿದ್ದಿದ್ದ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ನೆಲದ ಮೇಲೆ ಬಿದ್ದು ಹೊರಳಾಡುತ್ತಾ, ಪೋಷಕರಿಗೆ, ಸಂಬಂಧಿಕರಿಗೆ ಕೈ ಮುಗಿದು ಬೇಡಿಕೊಳ್ಳುತ್ತಾ, ಮದುವೆ ಮಾಡಬೇಡ ಎಂದು ಅಂಗಲಾಚುತ್ತಿದ್ದ ಬಾಲಕಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಬಾಲಕಿಗೆ ಬಲವಂತವಾಗಿ ಮನೆಯ ಹೊರಭಾಗದಲ್ಲೇ ತಾಳಿಕಟ್ಟುವ ಪ್ರಯತ್ನ ನಡೆದಿದ್ದು, ಈ ವೇಳೆ ಬಾಲಕಿಯು ನನಗೆ ಈ ಮದುವೆ ಬೇಡ ಎಂದು ಗೋಗರೆಯುತ್ತಾ, ನನಗೆ ತಾಳಿ ಕಟ್ಟಿಸಬೇಡಿ, ಯಾರಾದರೂ ನನ್ನನ್ನು ಕಾಪಾಡಿ, ನಿಮ್ಮ ಕಾಲಿಗೆ ಬೀಳುತ್ತೇನೆ, ನನ್ನನ್ನು ಈ ಮದುವೆಯಿಂದ ರಕ್ಷಿಸಿ ಎಂದು ಗ್ರಾಮಸ್ಥರಿಗೆ ಪರಿಪರಿಯಾಗಿ ಕೇಳಿಕೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಐವರ ವಿರುದ್ಧ ದಾಖಲು: ಜಾಲತಾಣ ದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಳ್ಳಕೆರೆ ಪೊಲೀಸರು ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಿದ್ದಾರೆ. ಅಲ್ಲದೇ ಬಾಲ್ಯ ವಿವಾಹ ಯತ್ನ ಪ್ರಕರಣದಡಿ ಐವರ ವಿರುದ್ದ ದೂರು ಕೂಡ ದಾಖಲು ಮಾಡಿ ಕೊಂಡಿದ್ದಾರೆ.