ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ರದ್ದು

Views: 58
ಕನ್ನಡ ಕರಾವಳಿ ಸುದ್ದಿ: ಶ್ರೀರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ದಾಖಲಾಗಿದ್ದ 2ನೇ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ಸಿಐಡಿ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವೈಯಕ್ತಿಕ ವೈವಾಹಿಕ ಸಮಸ್ಯೆಯಿಂದಾಗಿ ಮಹಿಳೆಯೊಬ್ಬರು 2015 ರಲ್ಲಿ ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಸಿಐಡಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಇದು ದುರುದ್ದೇಶದಿಂದ ನೀಡಿದ ಸುಳ್ಳು ದೂರು ಎಂದು ಶ್ರೀಗಳ ಪರ ವಕೀಲ ಪಿ.ಎನ್.ಮನಮೋಹನ್ ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
2024ರ ಜೂನ್ 11 ರಂದು ಕಾಯ್ದಿರಿಸಿದ್ದ ಆದೇಶವನ್ನು ಸುಮಾರು ಎಂಟು ತಿಂಗಳ ನಂತರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಶುಕ್ರವಾರ ಪ್ರಕಟಿಸಿದೆ. ಶ್ರೀಗಳ ಪರವಾಗಿ ವಕೀಲ ಪಿ.ಎನ್. ಮನಮೋಹನ್ ವಾದಿಸಿದ್ದಾರೆ.
ಶ್ರೀರಾಮಚಂದ್ರಪುರ ಮಠ ಮತ್ತು ಬೆಂಗಳೂರಿನ ಗಿರಿನಗರದಲ್ಲಿ ತಮ್ಮ ಮೇಲೆ ರಾಘವೇಶ್ವರ ಭಾರತೀ ಸ್ವಾಮೀಜಿ ಅತ್ಯಾಚಾರ ಎಸಗಿದ್ದಾರೆ ಎಂದು 29 ಆಗಸ್ಟ್ 2015ರ ಆ.29 ರಂದು ಸಂತ್ರಸ್ತೆಯು ಬೆಂಗಳೂರಿನ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ತನಿಖೆ ನಡೆಸಿದ್ದ ಸಿಐಡಿಯ ವಿಶೇಷ ತನಿಖಾ ದಳವು 7 ಸೆಪ್ಟೆಂಬರ್ 2018ರ ಸೆ.7ರಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಹೀಗಾಗಿ ದೂರು ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ರಾಘವೇಶ್ವರ ಸ್ವಾಮೀಜಿ ಹೈಕೋರ್ಟ್ಗೆ ಕೋರಿದ್ದರು.
2006ರಲ್ಲಿ ಚಾತುರ್ಮಾಸ್ಯ ನಡೆಯುತ್ತಿದ್ದಾಗ ಬೆಂಗಳೂರಿನ ಗಿರಿನಗರದಲ್ಲಿ ತಾವು ತಂಗಿದ್ದ ಕೊಠಡಿಗೆ ಕರೆಸಿಕೊಂಡು ರಾಘವೇಶ್ವರ ಶ್ರೀ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ದೂರು ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತ್ರಸ್ತೆಯ ಪತಿ ಮಂಜುನಾಥ್ ಹೆಬ್ಬಾರ್ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ 2021ರಲ್ಲಿ ರದ್ದುಪಡಿಸಿತ್ತು
ವೈಯಕ್ತಿಕ ವೈವಾಹಿಕ ಸಮಸ್ಯೆಯಿಂದಾಗಿ ಮಹಿಳೆ ಸುಳ್ಳು ಅತ್ಯಾಚಾರದ ದೂರು ನೀಡಿದ್ದಾರೆ ಎಂದು ಶ್ರೀಗಳ ಪರ ವಕೀಲ ಪಿ.ಎನ್. ಮನಮೋಹನ್ ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಇದೀಗ ಪ್ರಕರಣ ರದ್ದುಪಡಿಸಿ ತೀರ್ಪು ನೀಡಿದೆ.