ಮದುವೆ ಆಮಂತ್ರಣ ಹಂಚಿ ವಾಪಸ್ ಆಗುತ್ತಿದ್ದ ಕಾನ್ಸ್ಟೇಬಲ್ ಹತ್ಯೆ

Views: 191
ಕನ್ನಡ ಕರಾವಳಿ ಸುದ್ದಿ: ಹಸೆಮಣೆ ಏರಬೇಕಿದ್ದ ಪೊಲೀಸ್ ಕಾನ್ಸ್ಟೇಬಲ್ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಕೆಎಸ್ಐಎಸ್ಎಫ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹರೀಶ(33) ಎನ್ನುವವರಿಗೆ ಇದೇ ನವೆಂಬರ್ 11 ರಂದು ಮದುವೆ ನಿಶ್ಚಯವಾಗಿತ್ತು. ಸಂಬಂಧಿಕರ ಮನೆಗೆ ಲಗ್ನ ಪತ್ರಿಕೆ ಕೊಟ್ಟು ಬರುವಾಗ ಬೈಕ್ ಅಡ್ಡ ಹಾಕಿದ ದುಷ್ಕರ್ಮಿಗಳು ಆಯುಧಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ.
ಇವರಿಗೆ ಗಂಡಸಿ ಹೋಬಳಿಯ ಯುವತಿಯೊಂದಿಗೆ ನ.11 ರಂದು ನಗರದ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಹಾಸನದ ಸಂಬಂಧಿಕರು ಮತ್ತು ಸ್ನೇಹಿತರಿಗೆ ಲಗ್ನಪತ್ರಿಕೆ ನೀಡಿ ನ.04 ರಂದು ರಾತ್ರಿ ಬೈಕ್ನಲ್ಲಿ ಸ್ವಗ್ರಾಮ ಬಾಗೇಶಪುರಕ್ಕೆ ತೆರಳುತ್ತಿದ್ದ ವೇಳೆ ದುದ್ದ-ಅರಸೀಕೆರೆ ರಸ್ತೆ ರೈಲ್ವೆ ಬ್ರಿಡ್ಜ್ ಬಳಿ ರಾತ್ರಿ 9. 30 ರಿಂದ 10. 20 ರ ನಡುವೆ ದುಷ್ಕರ್ಮಿಗಳು ಕಣ್ಣಿಗೆ ಕಾರದಪುಡಿ ಎರಚಿ ಆಯುಧದಿಂದ ತಲೆ ಹಿಂದಕ್ಕೆ ಹೊಡೆದು ಕೊಲೆ ಮಾಡಿದ್ದಾರೆ.
ಮೃತ ಹರೀಶ ನಗರದ ಬಿ.ಕಾಟೀಹಳ್ಳಿಯಲ್ಲಿ ಇರುವಾಗ ತನ್ನ ಅಕ್ಕ ಪುಷ್ಪ ಎಂಬುವರ ಮನೆ ಪಕ್ಕದಲ್ಲೇ ವಾಸವಿದ್ದ ಸೈನಿಕ ಹಂಪನಹಳ್ಳಿ ಹರೀಶ್ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈ ಕಾರಣದಿಂದ ಮೃತ ಹರೀಶ ಮತ್ತು ಸೈನಿಕ ಹರೀಶ್ ನಡುವೆ ವೈಷಮ್ಯವಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ವೈಷಮ್ಯದಿಂದಲೇ ಸೈನಿಕ ಹರೀಶ ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರಬಹುದು ಎಂದು ಮೃತನ ಚಿಕ್ಕಪ್ಪನ ಮಗ ಮಂಜುನಾಥ ಪೊಲೀಸರಿಗೆ ದೂರು ನೀಡಿದ್ದಾರೆ.






