ರಾಮಮಂದಿರ ಉದ್ಘಾಟನೆ: ವ್ಯಾಪಕ ಆಕ್ರೋಶ ಬೆನ್ನಲ್ಲಿ ಅರ್ಧ ದಿನ ರಜೆ ಆದೇಶ ಹಿಂಪಡೆದದ್ದು ಯಾಕೆ.?

Views: 137
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಕೂಡ ಸೋಮವಾರ ಮಧ್ಯಾಹ್ನ 2.30ರವರೆಗೆ ರಜೆ ನೀಡಿ ಆದೇಶ ಹೊರಡಿಸಿತ್ತು. ಈ ಬಗ್ಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿ ಏಮ್ಸ್ ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ.
ಜ.22 ರಂದು ಮಧ್ಯಾಹ್ನ 02.30 ಗಂಟೆಗಳವರೆಗೆ ಸಂಸ್ಥೆಯು ಅರ್ಧ ದಿನ ಮುಚ್ಚಿರುತ್ತದೆ ಎಂದು ಎಲ್ಲಾ ಉದ್ಯೋಗಿಗಳ ಮಾಹಿತಿಗಾಗಿ ಸೂಚಿಸಲಾಗಿದೆ. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಘಟಕಗಳು ಮತ್ತು ಶಾಖಾ ಅಧಿಕಾರಿಗಳು, ತಮ್ಮ ಅಧೀನದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಗಮನಕ್ಕೆ ತರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

ದಿನಾಂಕ 20.01.24ರ ಸುತ್ತೋಲೆ ನಂ. NO.F.13-1 /2006-Genlಕ್ಕೆ ಸಂಬಂಧಿಸಿ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೊರರೋಗಿ ವಿಭಾಗವು ಯಾವುದೇ ಅನಾನುಕೂಲತೆಯನ್ನು ತಡೆಗಟ್ಟಲು ತೆರೆದಿರುತ್ತದೆ ಮತ್ತು ಅಪಾಯಿಂಟ್ಮೆಂಟ್ ಹೊಂದಿರುವ ರೋಗಿಗಳಿಗೆ ಸೇವೆ ನೀಡಲು ತೆರೆದಿರುತ್ತದೆ. ಎಲ್ಲಾ ಕ್ಲಿನಿಕಲ್ ಸೇವೆಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಘಟಕಗಳು ಮತ್ತು ಶಾಖಾಧಿಕಾರಿಗಳು ತಮ್ಮಅಧೀನದಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳ ಗಮನಕ್ಕೆ ಇದನ್ನು ತರಲು ವಿನಂತಿಸಲಾಗಿದೆ ಎಂದ ಏಮ್ಸ್ನ ಆಡಳಿತಾಧಿಕಾರಿ ಸಹಿ ಮಾಡಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಮ ಮಂದಿರದ ಉದ್ಘಾಟನೆ ಹಿನ್ನೆಲೆ ಜನವರಿ 22ರಂದು ಸರ್ಕಾರವು ಅರ್ಧ ದಿನದ ರಜೆಯನ್ನು ಘೋಷಿಸಿದೆ ಎಂದು ದೆಹಲಿಯ ಏಮ್ಸ್ನ ಅಧಿಕೃತ ಪತ್ರವು ಈ ಹಿಂದೆ ತಿಳಿಸಿತ್ತು. ಇದರ ಬೆನ್ನಲ್ಲೇ ವ್ಯಾಪಕವಾದ ಜನಾಕ್ರೋಶ ವ್ಯಕ್ತವಾಗಿತ್ತು. ಆಸ್ಪತ್ರೆಗಳಂತಹ ತುರ್ತು ಸೇವಾ ಘಟಕಗಳು ರಾಮಮಂದಿರ ಉದ್ಘಾಟನೆ ನೆಪದಲ್ಲಿ ಸಾರ್ವಜನಿಕರಿಗೆ ಸೇವೆಯನ್ನು ಮೊಟಕುಗೊಳಿಸಿರುವುದನ್ನು ವಿರೋಧಿಸಿತ್ತು. ಏಮ್ಸ್ನ ಅರ್ಧ ದಿನದ ರಜೆ ಆದೇಶವನ್ನು ವಿರೋಧ ಪಕ್ಷದ ಹಲವು ನಾಯಕರು ಟೀಕಿಸಿದ್ದರು. ಈ ನಿರ್ಧಾರದಿಂದಾಗಿ ಆರೋಗ್ಯ ಸೇವೆಗಳು ಅಸ್ತವ್ಯಸ್ತಗೊಳ್ಳುತ್ತವೆ ಎಂದು ಹೇಳಿದ್ದರು.
ಶಿವಸೇನಾ(ಉದ್ದವ್ ಬಣ) ಪ್ರಿಯಾಂಕಾ ಚತುರ್ವೇದಿ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ದಯವಿಟ್ಟು ಜ. 22ರಂದು ನೀವು ತುರ್ತು ವೈದ್ಯಕೀಯ ಚಿಕಿತ್ಸೆಗೆ ಹೋಗಬೇಡಿ, ಹೋಗುವುದನ್ನು ನಿಗದಿಪಡಿಸಿದ್ದರೆ ಅದನ್ನು ಮಧ್ಯಾಹ್ನ 2 ಗಂಟೆಯ ನಂತರಕ್ಕೆ ಮುಂದುವರಿಸಿ, ಏಮ್ಸ್ ದೆಹಲಿ, ಮರ್ಯಾದಾ ಪುರುಷೋತ್ತಮ್ ರಾಮ್ ಅವರನ್ನು ಸ್ವಾಗತಿಸಲು ಸಮಯ ತೆಗೆದುಕೊಳ್ಳುತ್ತಿದೆ. ರಾಮನನ್ನು ಸ್ವಾಗತಿಸಲು ಆರೋಗ್ಯ ಸೇವೆಗಳಿಗೆ ಅಡ್ಡಿಮಾಡಿರುವುದನ್ನು ಭಗವಾನ್ ರಾಮ ಒಪ್ಪುತ್ತಾರೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದು ಹೇಳಿದ್ದರು.
ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರು ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದು, ಜನರು ಅಪಾಯಿಂಟ್ಮೆಂಟ್ಗಾಗಿ ಕಾಯುತ್ತಾ ಏಮ್ಸ್ ಗೇಟ್ಗಳ ಹೊರಗೆ ಚಳಿಯಲ್ಲಿ ಮಲಗಿದ್ದಾರೆ. ಬಡವರು ಮತ್ತು ಸಾಯುತ್ತಿರುವವರು ಕಾಯಬಹುದು, ಏಕೆಂದರೆ ಮೋದಿಯ ಪ್ರಚಾರಕ್ಕೆ ಆದ್ಯತೆ ನೀಡಲಾಗುತ್ತಿದೆಯಲ್ಲಾ ಎಂದು ಹೇಳಿದ್ದಾರೆ.






