ಸರಸ ಸಲ್ಲಾಪಕ್ಕೆ ಅಡ್ಡಿಯಾದ ಗಂಡ,ಅತ್ತೆ-ಮಾವ ಮಕ್ಕಳನ್ನು ಮುಗಿಸಲು ಯತ್ನಿಸಿದಾಕೆ ಅರೆಸ್ಟ್!

Views: 188
ಕನ್ನಡ ಕರಾವಳಿ ಸುದ್ದಿ: ತನ್ನ ಸರಸ ಸಲ್ಲಾಪಕ್ಕೆ ಅಡ್ಡಿಯಾದ ಗಂಡ, ಅತ್ತೆ-ಮಾವ ಮಕ್ಕಳು ಅಡ್ಡಿಯಾಗುತ್ತಾರೆ ಅನುಮಾನಿಸಿ ಮುಗಿಸಲು ಯತ್ನಿಸಿದ ಮಹಿಳೆ ಪೊಲೀಸ್ ಕೈಯಲ್ಲಿ ಲಾಕ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಅನ್ನಕ್ಕೆ ವಿಷ ಹಾಕಿ ಇಡೀ ಕುಟುಂಬವನ್ನು ಕೊಲ್ಲಲು ಯತ್ನಿಸಿದ್ದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ನಡೆದಿದೆ.
ಆರೋಪಿ ಚೈತ್ರಾ (33) ಬಂಧಿತ ಮಹಿಳೆ.
11 ವರ್ಷಗಳ ಹಿಂದೆ ಗಜೇಂದ್ರ ಎಂಬವರೊಂದಿಗೆ ಚೈತ್ರಾ ವಿವಾಹವಾಗಿದ್ದಳು. ಕೆಲ ವರ್ಷಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳೂ ಇದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ಸಣ್ಣ-ಪುಟ್ಟ ವಿಚಾರಕ್ಕೂ ಚೈತ್ರಾ ಗಂಡನೊಂದಿಗೆ ಜಗಳವಾಡುತ್ತಿದ್ದಳು.
ಈ ನಡುವೆಯೇ ಚೈತ್ರಾಳಿಗೆ ಪುನೀತ್ ಎಂಬಾತ ಪರಿಚಯವಾಗಿದ್ದ. ಇಬ್ಬರಿಗೂ ಸಲುಗೆ ಬೆಳೆದಿತ್ತು. ಹೀಗಾಗಿ ಪುನೀತ್ ಜೊತೆಗೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು.
ಚೈತ್ರ-ಪುನೀತ್ ನಡುವಿನ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ ಗಜೇಂದ್ರ ಈ ವಿಚಾರವನ್ನು ಚೈತ್ರಾಳ ತಂದೆ-ತಾಯಿಗೆ ತಿಳಿಸಿದ್ದ. ಕೊನೆಗೆ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿದ್ದರು. ಬಳಿಕ ದಂಪತಿ ಅನ್ಯೋನ್ಯವಾಗಿದ್ದರು. ಪುನಃ ಕೆಲ ದಿನಗಳಿಂದ ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು.ಈ ವಿಷಯ ಕುಟುಂಬಸ್ಥರಿಗೆ ತಿಳಿಯುವ ಮುನ್ನ ಹಾಗೂ ತನ್ನ ಅಕ್ರಮ ಸಂಬಂಧಕ್ಕೆ ಗಂಡ, ಮಕ್ಕಳು, ಅತ್ತೆ-ಮಾವ ಅಡ್ಡಿಯಾಗುತ್ತಾರೆ ಎಂಬ ಅನುಮಾನದಿಂದ ಎಲ್ಲರನ್ನೂ ಮುಗಿಸುವ ಸ್ಕೆಚ್ ಹಾಕಿದಳು.
ಪತಿ ಹಾಗೂ ಅವರ ಕುಟುಂಬದವರಿಗೆ ತಿಳಿಯದಂತೆ ಊಟ-ತಿಂಡಿಯಲ್ಲಿ ವಿಷಯುಕ್ತ ಮಾತ್ರೆಗಳನ್ನು ಹಾಕುತ್ತಿದ್ದಳು. ಇದಕ್ಕೆ ಪರಸಂಗ ಹೊಂದಿದ್ದ ಶಿವು ಸಹಕಾರ ನೀಡಿದ್ದ.
ಈ ವಿಷಯ ತಿಳಿದು ಪತಿ ಗಜೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ಬಳಿಕ ಚೈತ್ರಾಳನ್ನು ಬೇಲೂರು ಪೊಲೀಸರು ಬಂಧಿಸಿದ್ದಾರೆ.