ಸಾಮಾಜಿಕ

ಶಾಸ್ತ್ರೋಕ್ತವಾಗಿ ಮದುವೆ ನಡೆಯದಿದ್ದರೆ ಹಿಂದೂ ವಿವಾಹವೆಂದು ಪರಿಗಣಿಸಲಾಗದು:  ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು    

Views: 76

ಹೊಸದಿಲ್ಲಿ: ಹಿಂದೂ ವಿವಾಹ ಮಹೋತ್ಸವ ಎಂಬುದು ಕೇವಲ ‘ಹಾಡು, ನೃತ್ಯ, ಊಟ ಉಪಚಾರ’ದ ವಾಣಿಜ್ಯಾತ್ಮಕ ವ್ಯವಹಾರವಲ್ಲ. ಸಾಂಪ್ರದಾಯಿಕ ವಿಧಿ ವಿಧಾನಗಳಿಲ್ಲದೆ ನಡೆದ ವಿವಾಹ ಹಿಂದೂ ವಿವಾಹ ಕಾಯಿದೆಯಡಿ ಮಾನ್ಯವಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

”ಭಾರತೀಯ ಸಮಾಜದಲ್ಲಿ ಹಿಂದೂ ವಿವಾಹದ ಸಂಸ್ಕಾರಗಳಿಗೆ ಮಹತ್ವದ ಸ್ಥಾನವಿದೆ. ವಿವಾಹದ ಮೌಲ್ಯ ಎತ್ತಿ ಹಿಡಿಯಲು ಸಂಪ್ರದಾಯ, ಪದ್ದತಿ ಪಾಲನೆ ಅತ್ಯಗತ್ಯ,” ಎಂದು ನ್ಯಾ. ಬಿ.ವಿ. ನಾಗರತ್ನ, ನ್ಯಾ. ಆಗಸ್ಟಿನ್‌ ಜಾರ್ಜ್ ಮಸಿಹ್‌ ಅವರಿದ್ದ ನ್ಯಾಯಪೀಠ ಹೇಳಿದೆ.

ವಿವಾಹ ವಿಚ್ಛೇದನ ಕೋರಿ ದಂಪತಿ ಸಲ್ಲಿಸಿ ಅರ್ಜಿ ವಿಚಾರಣೆ ವೇಳೆ ಹಿಂದೂ ವಿವಾಹ ಕಾಯಿದೆ ಅಡಿಯಲ್ಲಿ ವಿವಾಹದ ಮಾನ್ಯತೆಗೆ ಕೇವಲ ಪ್ರಮಾಣ ಪತ್ರವಷ್ಟೇ ಸಾಲದು. ಅಗತ್ಯವಾದ ಧಾರ್ಮಿಕ, ಸಂಪ್ರದಾಯಗಳು ಶಾಸ್ತ್ರೋಕ್ತವಾಗಿ ನಡೆದಿರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕಾಯಿದೆ ಪ್ರಕಾರ ಮದುವೆಗೆ ಮಾನ್ಯತೆ ನೀಡಲು ಶಾಸ್ತ್ರೋಕ್ತ ಕಾರ್ಯಕ್ರಮಗಳು ನಡೆದಿರಬೇಕು. ಸಮಸ್ಯೆ ಅಥವಾ ವಿವಾದ ಉಂಟಾದಾಗ ಪರಿಹರಿಸಲು ಸಮಾರಂಭದ ಪುರಾವೆಗಳು ನೆರವಿಗೆ ಬರಲಿವೆ. ಅಂತಹ ಆಚರಣೆ ಇಲ್ಲದೆ ನಡೆದ ಮದುವೆಗೆ ಕಾಯಿದೆಯ ಸೆಕ್ಷನ್‌ 7ರ ಪ್ರಕಾರ ಮಾನ್ಯತೆ ಸಿಗುವುದಿಲ್ಲ. ಕೇವಲ ಇಲಾಖೆಯ ಪ್ರಮಾಣ ಪತ್ರದಿಂದ ವೈವಾಹಿಕ ಸ್ಥಿತಿ ದೃಢೀಕರಿಸಲಾಗದು. ಹಿಂದೂ ವಿವಾಹದ ವಿಧಿ ವಿಧಾನಗಳಂತೆ ಮದುವೆ ನಡೆಯದಿದ್ದರೆ ಅದನ್ನು ಹಿಂದೂ ವಿವಾಹವೆಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ವಿವರಿಸಿದೆ.

ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ಮದುವೆ ಎನ್ನುವುದು ಬಹಳ ಪವಿತ್ರ. ಇದು ಇಬ್ಬರು ವ್ಯಕ್ತಿಗಳ ನಡುವಿನ ಜೀವನ ಪರ್ಯಂತ, ಘನತೆಯ, ಸಮಾನ, ಸಹಮತದ ಮತ್ತು ಆರೋಗ್ಯಕರ ಸಮ್ಮಿಲನ ಎಂದು ಕೋರ್ಟ್ ಹೇಳಿದೆ.

ಸೆಕ್ಷನ್ 8ರ ಅಡಿ ವಿವಾಹ ಮಾನ್ಯವಲ್ಲ ಪ್ರಕರಣದಲ್ಲಿ ಕೋರ್ಟ್‌ ಮೆಟ್ಟಿಲು ಹತ್ತಿದ್ದ ದಂಪತಿ ಹಿಂದೂ ವಿಧಿ ವಿಧಾನಗಳ ಪ್ರಕಾರ ಶಾಸ್ತ್ರೋಕ್ತವಾಗಿ ವಿವಾಹವಾಗದೆ, ಕಾಯಿದೆಯ ಸೆಕ್ಷನ್‌ 8ರ ಅಡಿಯಲ್ಲಿ ವಿವಾಹ ನೋಂದಾಯಿಸಿಕೊಂಡಿದ್ದರು.

ಹಿಂದೂ ವಿವಾಹ ವಿಧಿ ವಿಧಾನದಂತೆ ಮದುವೆ ನಡೆಯದೆ ಇರುವಾಗ ಸೆಕ್ಷನ್‌ 8ರ ಅಡಿಯಲ್ಲಿ ನೋಂದಣಿ ಅಧಿಕಾರಿ ವಿವಾಹವನ್ನು ನೋಂದಾಯಿಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ 7ರ ಪ್ರಕಾರ ವೈವಾಹಿಕ ಸಮಾರಂಭದಲ್ಲಿ ಭಾಗಿಯಾಗಿದ್ದಲ್ಲಿ ಮಾತ್ರವೇ ದೃಢೀಕರಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.

ಹಿಂದೂ ವಿವಾಹ ಕಾಯಿದೆಯ ಅಡಿಯಲ್ಲಿ ಅಗತ್ಯವಾದ ಧಾರ್ಮಿಕ ವಿಧಿ ವಿಧಾನಗಳು ಪೂರೈಸದ ವಿವಾಹಗಳನ್ನು ನೋಂದಣಿ ಮಾಡುತ್ತಿರುವ ಪ್ರವೃತ್ತಿ ಬಗ್ಗೆ ಇಬ್ಬರೂ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಸಮಾಜದಲ್ಲಿ ಒಂದು ಸಂಸ್ಥೆಯಾಗಿ ಮದುವೆಗೆ ಹೆಚ್ಚಿನ ಮೌಲ್ಯ ಇದೆ. ದಂಪತಿಯ ಪೋಷಕರು ಕಾಗದದ ನೋಂದಣಿಗಳನ್ನು ಪ್ರೋತ್ಸಾಹಿಸಬಾರದು. ವಿವಾಹ ಎಂಬ ಸಂಸ್ಥೆಯನ್ನು ಹೇಗೆ ಪ್ರವೇಶಿಸುತ್ತಿದ್ದೇವೆ ಎಂಬ ಬಗ್ಗೆ ಯುವಜನ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದೂ ವಿವಾಹದ ಶಾಸ್ತ್ರೋಕ್ತ ಆಚರಣೆಗಳನ್ನು ಕ್ಷುಲ್ಲಕವೆಂದು ಪರಿಗಣಿಸುವ ಬದಲು, ”ಶ್ರದ್ಧೆಯಿಂದ, ಕಟ್ಟುನಿಟ್ಟಾಗಿ ಮತ್ತು ಧಾರ್ಮಿಕವಾಗಿ ಪಾಲಿಸಬೇಕು,” ಎಂದು ನ್ಯಾಯಪೀಠ ಹೇಳಿದೆ.

Related Articles

Back to top button
error: Content is protected !!