ಶಾದಿ ಡಾಟ್ ಕಾಮ್ ನಲ್ಲಿ ಸಿಕ್ಕವನು ‘ಉಂಡೂ ಹೋದ ಕೊಂಡೂ ಹೋದ’…

Views: 0
ಬೆಂಗಳೂರು: ಇತ್ತೀಚೆಗೆ ಬಾಳಸಂಗಾತಿಯನ್ನು ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಹುಡುಕುವ ಪರಿಪಾಠ ಹೆಚ್ಚಾಗುತ್ತಿದೆ. ಎಲ್ಲವೂ ಡಿಜಿಟಲ್ ಮಯವಾಗಿರೋವಾಗ ವರ-ವಧು ಅನ್ವೇಷಣೆಯೂ ಮ್ಯಾಟ್ರಿಮೋನಿ ಸೈಟ್ ಗಳಲ್ಲಿ ನಡೆಯುತ್ತಿದೆ. ಆದರೆ ಇದು ವಂಚಕರಿಗೂ ರಹದಾರಿಯಾಗಿದ್ದು, ಆನ್ ಲೈನ್ ಸಂಬಂಧಗಳು ವಂಚನೆಯಲ್ಲಿ ಕೊನೆಗೊಳ್ಳುತ್ತಿವೆ.
ರಿಹಾನಾ ಬೇಗಂ, ಈಕೆಗೆ ಇದು 2ನೇ ಮದುವೆ. ಆನ್ ಲೈನ್ ನಲ್ಲಿ ಸೈಯದ್ ತಸ್ಕೀನ್ ಅಹ್ಮದ್ ಎಂಬಾತನ ಪರಿಚಯವಾಗಿತ್ತು. 2ನೇ ಮದುವೆಗೆ ಒಪ್ಪಿ ನಿಖಾ ಮಾಡಿಕೊಂಡವನು ಉಂಡೂ ಹೋದ ಕೊಂಡೂ ಹೋದ ಎನ್ನುವಂತೆ ವಂಚಿಸಿದ್ದಾನೆ.
ಶಾದಿ ಡಾಟ್ ಕಾಮ್ ನಲ್ಲಿ ಪರಿಚಯವಾಗಿ ನಂಬಿಸಿ ಮದುವೆಯಾಗಿ ವಂಚನೆ ಮಾಡಿದ್ದಾನೆ. ಸೈಯದ್ ತಸ್ಕೀನ್ ಅಹ್ಮದ್ ವಿರುದ್ಧ ಪತ್ನಿ ರಿಹಾನಾ ಬೇಗಂ ಇಂದು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾಳೆ.
ನಂಬಿಸಿ ಮದುವೆಯಾದ ವಂಚಕ ಪತಿ, ತನ್ನ ಮನೆಯ ಕಾಮಗಾರಿ ನಡೆಯುತ್ತಿದೆ ಅಂತೇಳಿ ಪತ್ನಿ ಮನೆಯಲ್ಲೇ ವಾಸವಿದ್ದನಂತೆ. ಮದುವೆಯಾದ ಒಂದೇ ತಿಂಗಳಿಗೆ ಬ್ಯುಸಿನೆಸ್ ಗೆ ಹಣ ಬೇಕು ಅಂತ ಲಕ್ಷ ಲಕ್ಷ ಪೀಕಿದ್ದಾನೆ.
ಮೂರು ತಿಂಗಳ ಬಳಿಕ ಚಿನ್ನಾಭರಣ ಪಡೆದು ಪರಾರಿಯಾಗಿದ್ದಾನೆ. ಇದೇ ರೀತಿ ಐದಾರು ಮದುವೆಯಾಗಿ ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಆರೋಪಿ ಸೈಯದ್ ತಸ್ಕೀನ್ ಅಹ್ಮದ್ ಶಿವಾಜಿನಗರ ನಿವಾಸಿಯಾಗಿದ್ದು, ಹಣ ಕೊಡದೆ ತಲೆಮರೆಸಿಕೊಂಡಿದ್ದಾನಂತೆ
ರಾಮಮೂರ್ತಿನಗರ ಪೊಲೀಸ್ ಠಾಣೆಗೆ ರಿಹಾನಾ ಬೇಗಂ ದೂರು ನೀಡಿದ್ರೂ ಏನೂ ಪ್ರಯೋಜನವಾಗಿಲ್ಲವಂತೆ. ಈ ಹಿನ್ನೆಲೆ ಪತಿ ವಿರುದ್ಧ ಕಮಿಷನರ್ ಗೆ ದೂರು ನೀಡಿದ್ದಾರೆ.






