ಪತಿಗೆ ಹೃದಯಾಘಾತ ಆಸ್ಪತ್ರೆಯಲ್ಲಿ ಮತ್ತೆ ಪ್ರೀತಿ ಚಿಗುರಿ,ವಿಚ್ಛೇದಿತ ದಂಪತಿ ಮರು ಮದುವೆ

Views: 0
ಐದು ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದ ಗಾಜಿಯಾಬಾದ್ನ ಕೌಶಂಬಿಯ ದಂಪತಿ ಇತ್ತೀಚೆಗೆ ಮತ್ತೆ ವಿವಾಹವಾದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ.
ವಿನಯ್ ಜೈಸ್ವಾಲ್ ಮತ್ತು ಪೂಜಾ ಚೌಧರಿ 2012 ರಲ್ಲಿ ವಿವಾಹವಾಗಿದ್ದು, ಒಂದು ವರ್ಷ ಕಳೆಯುವಷ್ಟರಲ್ಲಿ ಅವರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟು ಇದು ಉಲ್ಬಣಗೊಳ್ಳುತ್ತಿದ್ದಂತೆ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.
ಅವರ ವಿಚ್ಛೇದನದ ಪ್ರಕರಣವು ಮೊದಲು ಗಾಜಿಯಾಬಾದ್ನ ಕೌಟುಂಬಿಕ ನ್ಯಾಯಾಲಯ, ಉಚ್ಚ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ನಲ್ಲಿ ನಡೆಯಿತು. ಐದು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ವಿನಯ್ ಮತ್ತು ಪೂಜಾ ಅಂತಿಮವಾಗಿ 2018 ರಲ್ಲಿ ವಿಚ್ಛೇದನ ಪಡೆದುಕೊಂಡು ಬೇರ್ಪಟ್ಟರು.
ಈ ವರ್ಷದ ಆಗಸ್ಟ್ನಲ್ಲಿ ವಿನಯ್ ಹೃದಯಾಘಾತಕ್ಕೀಡಾದರು. ಆಗ ಆತ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆತನ ಶಸ್ತ್ರಚಿಕಿತ್ಸೆಯ ಸುದ್ದಿ ಪೂಜಾಗೆ ತಲುಪಿದಾಗ, ಆಕೆ ತನ್ನ ಮಾಜಿ ಗಂಡನ ಯೋಗಕ್ಷೇಮ ವಿಚಾರಿಸಲು ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿದಳು.
ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದಂತೆ ಅವರ ನಡುವಿನ ಪ್ರೀತಿ ಮತ್ತೆ ಚಿಗುರಿತು. ಅಷ್ಟೇ ಅಲ್ಲ, ಅವರು ಮತ್ತೆ ಮದುವೆಯಾಗಲು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಡಲು ನಿರ್ಧರಿಸಿದರು. ನ.23 ರಂದು ವಿನಯ್ ಮತ್ತು ಪೂಜಾ ಪರಸ್ಪರರ ಕುಟುಂಬದ ಸಮ್ಮುಖದಲ್ಲಿ ಮತ್ತೆ ವಿವಾಹವಾದರು.
ವಿನಯ್ ಜೈಸ್ವಾಲ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್ಎಐಎಲ್) ನಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಮೂಲತಃ ಪಾಟ್ನಾ ನಿವಾಸಿಯಾಗಿರುವ ಪೂಜಾ ಚೌಧರಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.






