ಇತರೆ

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ,ಹೃದಯ ವಿದ್ರಾವಕ ಘಟನೆ!

Views: 403

ಕನ್ನಡ ಕರಾವಳಿ ಸುದ್ದಿ: ನಗರದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ ಮೆಂಟ್‌ನಲ್ಲಿ ನೆಲೆಸಿದ್ದ ಚೇತನ್ (45), ಇವರ ಪತ್ನಿ ರೂಪಾಲಿ (43), ಪುತ್ರ ಕುಶಾಲ್ (15) ಹಾಗೂ ತಾಯಿ ಪ್ರಿಯಂವದಾ (62) ಮೃತಪಟ್ಟವರು.

ಚೇತನ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ ಉಳಿದವರ ಶವಗಳು ಮಲಗಿದ್ದ ರೀತಿಯಲ್ಲಿ ಕಂಡುಬಂದಿವೆ.

ಬಹುಶಃ ಚೇತನ್ ಅವರು ತಾಯಿ, ಪತ್ನಿ ಹಾಗೂ ಪುತ್ರನಿಗೆ ವಿಷ ಪ್ರಾಶನ ಮಾಡಿ ಅವರುಗಳೆಲ್ಲಾ ಮೃತಪಟ್ಟ ನಂತರ ಇಂದು ಬೆಳಗಿನ ಜಾವ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹಾಸನ ಮೂಲದ ಚೇತನ್ ಅವರು ಸಿವಿಲ್ ಎಂಜಿನಿಯರ್. ಇವರು ದುಬೈ ಸೇರಿದಂತೆ ಇತರೆ ದೇಶಗಳಿಗೆ ಕಾಂಟ್ರಾಕ್ಟ್ ಮೂಲಕ ಕಾರ್ಮಿಕರನ್ನು ಕಳುಹಿಸುತ್ತಿದ್ದರು.

ಕೋವಿಡ್‌ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಹೇಳಲಾಗುತ್ತಿದೆ. ಕೋವಿಡ್ ಸಂಕಷ್ಟದಿಂದಾಗಿ ಕುಟುಂಬದಲ್ಲಿ ಆರ್ಥಿಕ ದುಸ್ಥಿತಿ ಬಿಗಡಾಯಿಸಿತ್ತು. ಅದರೂ ಚೇತನ್ ಅವರು ಧೃತಿಗೆಡದೆ ಎಲ್ಲವನ್ನೂ ನಿಭಾಯಿಸುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಈ ನಡುವೆ ಸಾಲದ ಸುಳಿಯಲ್ಲಿ ಚೇತನ್ ಸಂಸಾರ ಸಿಲುಕಿತ್ತು. ಹೀಗಾಗಿ ಚೇತನ್ ಅವರಿಗೆ ಬೇರೆ ದಾರಿ ಕಾಣದೆ ಕುಟುಂಬ ಸಮೇತ ಆತ್ಮಹತ್ಯೆಗೆ ನಿರ್ಧರಿಸಿದ್ದರೆಂಬ ಅನುಮಾನ ಮೂಡಿದೆ.

ಪುತ್ರ ಕುಶಾಲ್ ಎಸ್‌ಎಸ್‌ಎಲ್ಸಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದಿದ್ದನು. ಈತ ಶಾಲೆಯಿಂದ ಮನೆಗೆ ಬಂದ ನಂತರ ಚೇತನ್ ಅವರು ಕುಟುಂಬ ಸಮೇತ ಹಾಸನಕ್ಕೆ ಹೋಗೋಣವೆಂದು ಎಲ್ಲರನ್ನೂ ಹೊರಡಿಸಿದ್ದಾರೆ.

ಅದರಂತೆ ಹಾಸನದ ಗೊರೂರು ಸಮೀಪದ ತಮ್ಮ ಹಳ್ಳಿಗೆ ಹೋಗಿ ಎಲ್ಲರನ್ನೂ ಮಾತನಾಡಿಸಿಕೊಂಡು ನಿನ್ನೆ ಮನೆಗೆ ಹಿಂದಿರುಗಿದ್ದಾರೆ. ಆದರೆ ಬೆಳಗಾಗುವಷ್ಟರಲ್ಲಿ ನಾಲ್ವರೂ ಸಾವನ್ನಪ್ಪಿದ್ದಾರೆ.

ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಮೆರಿಕದಲ್ಲಿರುವ ತಮ್ಮ ಸಹೋದರ ಭರತ್ ಚೇತನ್ ಅವರು ಕರೆ ಮಾಡಿ ಮನೆಯಲ್ಲಿನ ಸಮಸ್ಯೆ ಹೇಳಿಕೊಂಡು ನಂತರ ಮೊಬೈಲ್ ಕರೆ ಸ್ಥಗಿತಗೊಳಿಸಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೇತನ್‌ರ ವರ್ತನೆಯಿಂದ ಭರತ್ ಗಾಬರಿಯಾಗಿದೆ. ಶಕ್ಷಣ ಮತ್ತೆ ಮೊಬೈಲ್‌ ಕರೆ ಮಾಡಿದಾಗ ಚೇತನ್ ಸ್ವೀಕರಿಸಿಲ್ಲ, ಕೂಡಲೇ ಮೈಸೂರಿನಲ್ಲೇ ನೆಲೆಸಿರುವ ರೂಪಾಲಿ ಅವರ ಪೋಷಕರಿಗೆ ಕರೆ ಮಾಡಿ ಚೇತನ್ ಅವರ ಮನೆ ಬಳಿ ಹೋಗಿ ನೋಡುವಂತೆ ಹೇಳಿದ್ದಾರೆ. ಸಂಬಂಧಿಕರು ವಿಶ್ವೇಶ್ವರಯ್ಯನಗರದಲ್ಲಿರುವ ಚೇತನ್ ಅವರ ಮನೆ ಬಳಿ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ಗಾಬರಿಗೊಂಡ ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಿದ್ಯಾರಣ್ಯಪುರಂ ಠಾಣೆ ಇನ್ಸ್‌ಪೆಕ್ಟರ್ ಮೋಹಿತ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಕಿಟಕಿ ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಚೇತನರ ಮೃತದೇಹ ಕಂಡುಬಂದಿದೆ.

ತಕ್ಷಣ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಚೇತನ್ ಅವರ ತಾಯಿ, ಪತ್ನಿ, ಮಗ ಅವರ ಮೃತದೇಹಗಳು ಕಂಡುಬಂದಿವೆ.

ಚೇತನ್‌ರವರು ರಾತ್ರಿಯೇ ಊಟದಲ್ಲಿ ಇವರೆಲ್ಲರಿಗೂ ವಿಷಪ್ರಾಶನ ಮಾಡಿ ನಂತರ ಎಲ್ಲರೂ ಮೃತಪಟ್ಟಿದ್ದಾರೆಂದು ಖಚಿತಪಡಿಸಿಕೊಂಡೇ ಬೆಳಿಗ್ಗೆ ಸಹೋದರನಿಗೆ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕುಟುಂಬದ ಸಾವಿಗೆ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

Related Articles

Back to top button