ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

Views: 0
ಕುಂದಾಪುರ : ಮಾದಕ ವ್ಯಸನ ನಮ್ಮ ಇಡೀ ದೇಹವನ್ನು ಆವರಿಸಿ ನಿತ್ರಾಣ, ನರದೌರ್ಬಲ್ಯ, ಮೆದುಳಿಗೆ ಹಾನಿ, ಶ್ವಾಸಕೋಶ ಎಲ್ಲವನ್ನು ಹಾಳುಮಾಡುತ್ತದೆ. ಮೊದಲಿಗೆ ಶೋಕಿಗಾಗಿ ಪ್ರಾರಂಭವಾಗುವ ಈ ಅಭ್ಯಾಸ ಕ್ರಮೇಣ ಚಟವಾಗಿ ಬದಲಾಗುತ್ತದೆ. ಡ್ರಗ್ಸ್ ಆರಂಭದಲ್ಲಿ ಆಕರ್ಷಕವಾಗಿ ಕಾಣಬಹುದು ಆದರೆ ಅದು ವ್ಯಕ್ತಿಯ ಭವಿಷ್ಯವನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಪ್ರತಿಯೊಬ್ಬರು ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸುವ ಜವಬ್ದಾರಿ ತೆಗೆದುಕೊಳ್ಳಬೇಕಿದೆ ಎಂದು ಕುಂದಾಪುರದ ತಕ್ಷಾ ಕ್ಲಿನಿಕ್ನ ಮನೋವೈದ್ಯರಾದ ಡಾ| ನಿತಿನ್ ಎ. ಶೆಟ್ಟಿ ಹೇಳಿದರು.
ಅವರು ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್.ಸಿ.ಸಿ. ಘಟಕ, ಯುವ ರೆಡ್ಕ್ರಾಸ್ ಹಾಗೂ ರೋಟರಾಕ್ಟ್ ಘಟಕಗಳ ಸಹಯೋಗದೊಂದಿಗೆ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ದ್ವಿತೀಯ ಬಿ.ಸಿ.ಎ.ನ ವಿದ್ಯಾರ್ಥಿನಿ ಶಿಲ್ಪಾ ಪ್ರತಿಜ್ಞಾ ವಿಧಿ ಬೋಧಿಸಿದರು. ರೋರ್ಯಾಕ್ಟ್ ಕ್ಲಬ್ನ ಸಂಯೋಜಕರಾದ ಶ್ರೀ ಸತೀಶ್ ಕಾಂಚನ್, ಶ್ರೀಮತಿ ರೇವತಿ ಡಿ ಹಾಗೂ ಯುವ ರೆಡ್ಕ್ರಾಸ್ ಘಟಕದ ಸಂಯೋಜಕ ಶ್ರೀ ಯೋಗೀಶ್ ಶ್ಯಾನುಭೋಗ್, ವಾಣಿಜ್ಯ ಉಪನ್ಯಾಸಕ ಶರತ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಯಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಎನ್.ಸಿ.ಸಿ. ಅಧಿಕಾರಿ ಶ್ರೀ ಹರೀಶ್ ಬಿ. ಸ್ವಾಗತಿಸಿ, ಯುವ ರೆಡ್ಕ್ರಾಸ್ ಘಟಕದ ಸಂಯೋಜಕಿ ಶ್ರೀಮತಿ ಅವಿತಾ ಕೊರೆಯಾ ವಂದಿಸಿ, ವಿದ್ಯಾರ್ಥಿನಿ ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು.






