Breaking News: ಹನುಮ ಜಯಂತಿ ಪ್ರಸಾದ ಸೇವಿಸಿದ್ದ ಮಹಿಳೆ ಸಾವು; ನೂರಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು

Views: 4
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ನಿನ್ನೆ ಹನುಮ ಜಯಂತಿ ಪ್ರಯುಕ್ತ ಮಾಡಿದ್ದ ಪ್ರಸಾದ ಸೇವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಸಿದ್ದಲಿಂಗಮ್ಮ ಮೃತ ದುರ್ದೈವಿ.
ಬೆಳಗ್ಗೆ ತೀವ್ರ ವಾಂತಿ, ಭೇದಿಯಿಂದ ಅಸ್ವಸ್ಥಳಾಗಿದ್ದ ಸಿದ್ದಲಿಂಗಮ್ಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ನಿನ್ನೆ ನೂರಾರು ಮಂದಿ ಪ್ರಸಾದ ಸೇವಿಸಿದ್ದರು. ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದ ಭಕ್ತರಿಗೆ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಗಿದ್ದೇನು..?
ನಿನ್ನೆ ಹನುಮ ಜಯಂತಿ ಆಗಿತ್ತು. ಅಂತೆಯೇ ನಗರದ ವಿವಿಧ ದೇವಾಲಯಗಳಲ್ಲಿ ಮಾಡಿದ್ದ ಪ್ರಸಾದ ತಿಂದ ಬಳಿಕ ವಾಂತಿ ಭೇದಿ ಶುರುವಾಗಿದೆ ಎನ್ನಲಾಗಿದೆ. ನಗರದ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಿಗೆ ಭಕ್ತರು ಹೋಗಿದ್ದರು.
ದೇವಾಲಯಗಳಲ್ಲಿ ಪುಳಿಯೊಗರೆ, ಪಾಯಸ, ಲಡ್ಡು ತಯಾರು ಮಾಡಲಾಗಿತ್ತು. ಇದನ್ನು ಸೇವನೆ ಮಾಡಿದ್ದ ಭಕ್ತರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡವರನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆ, ಕೋಲಾರ, ಬೆಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.






