ಪರೀಕ್ಷೆಯಲ್ಲಿ ಒಂದು ಅಂಕ ಕಡಿಮೆ ತೆಗೆದುಕೊಂಡಿದ್ದಕ್ಕೆ ಶಿಕ್ಷಕಿ ಕಪಾಳಮೋಕ್ಷ: ವಿದ್ಯಾರ್ಥಿ ಆತ್ಮಹತ್ಯೆ
Views: 61
ಕನ್ನಡ ಕರಾವಳಿ ಸುದ್ದಿ: ಪರೀಕ್ಷೆಯಲ್ಲಿ ಒಂದು ಅಂಕ ಕಡಿಮೆ ತೆಗೆದುಕೊಂಡಿದ್ದನ್ನು ಶಿಕ್ಷಕಿಯೊಬ್ಬರು ಉಲ್ಲೇಖಿಸಿ ಅವಮಾನಿಸಿ, ಕಪಾಳಕ್ಕೆ ಹೊಡೆದ ಪರಿಣಾಮ, 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯಲ್ಲಿ ನಡೆದಿದೆ.
ಕೊತ್ತಪಳ್ಳಿಯ ರೈತ ದಂಪತಿ ತೆಲುಗು ಬುಚಣ್ಣ ಮತ್ತು ರೇಣಮ್ಮ ಅವರ ಎರಡನೇ ಮಗ ತರುಣ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಟರ್ಮೀಡಿಯೇಟ್ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದೆ. ಬಯೋಲಜಿ, ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಪಠ್ಯಗಳನ್ನು ಆರಿಸಿಕೊಂಡಿದ್ದನು ಎನ್ನಲಾಗಿದೆ.
ಕಾಲೇಜಿನ ಉಪನ್ಯಾಸಕಿಯೊಬ್ಬರು ತರಗತಿಯಲ್ಲಿ ಎಲ್ಲರ ಮುಂದೆ ತರುಣ್ನನ್ನು ಅಣಕಿಸಿ, 435 ಅಂಕಗಳೊಂದಿಗೆ ಮೊದಲ ರ್ಯಾಂಕ್ ಪಡೆದ ಇನ್ನೊಬ್ಬ ವಿದ್ಯಾರ್ಥಿಗೆ ಹೋಲಿಸಿದರು, ಹೀಯಾಳಿಸಿದರು. ಮತ್ತೊಬ್ಬರಿಗೆ ತನ್ನನ್ನು ಯಾಕೆ ಹೋಲಿಸೋದು, ಹೀಯಾಳಿಸೋದು ಯಾಕೆ ಎಂದು ಆತ ಪ್ರಶ್ನೆ ಮಾಡಿದಾಗ. ನೀನೇನು ಮಂತ್ರಿ ಮಗನಾ ಎಂದು ಎಲ್ಲರ ಮುಂದೆ ಕಪಾಳಕ್ಕೆ ಹೊಡೆದಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಬಾಲಕ ಎರಡು ದಿನಗಳ ಕಾಲ ಕಾಲೇಜಿಗೆ ಹೋಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರದಂದು ಮನೆಯಲ್ಲಿ ಯಾರು ಇಲ್ಲದ್ದನ್ನು ಕಂಡುಕೊಂಡ ಆತ ಡೆತ್ನೋಟ್ ಬರೆದಿಟ್ಟ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಲೇಜಿನಲ್ಲಿ ಇತ್ತೀಚೆಗೆ ಎದುರಿಸಿ ಅವಮಾನವೇ ಈ ಕಠಿಣ ನಿರ್ಧಾರಕ್ಕೆ ಕಾರಣ ಎಂದು ಆ ಡೆತ್ನೋಟ್ನಲ್ಲಿ ಬರೆಯಲಾಗಿದ್ದು, ವಿದ್ಯಾರ್ಥಿಗಳನ್ನು ಅವಮಾನಿಸುವ ಬದಲು ಪ್ರೋತ್ಸಾಹಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಿಕ್ಷಕಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 108ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ರದ ಸತ್ಯಾಸತ್ಯತೆ ಮತ್ತು ಅದರ ಒಳಗಿರುವ ಅಂಶಗಳ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ಹಾಗೂ ಕುಟುಂಬದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.
ವಿದ್ಯಾರ್ಥಿಯ ಅಕಾಲಿಕ ಸಾವಿನಿಂದ ಆಕ್ರೋಶಗೊಂಡಿರುವ ಕುಟುಂಬಸ್ಥರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿ, ಜವಾಬ್ದಾರರಾದ ಉಪನ್ಯಾಸಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಲವಾಗಿ ಆಗ್ರಹಿಸಿವೆ,






