ಕೋಟ ಅಮೃತೇಶ್ವರಿ ದೇಗುಲ: ಭಕ್ತರ ಸೋಗಿನಲ್ಲಿ ತೀರ್ಥ ಸ್ವೀಕರಿಸುತ್ತಿದ್ದ ವೇಳೆ ಕರಿಮಣಿ ಸರ ಕಳವು ಮಾಡಿದ ಖತರ್ನಾಕ್ ಕಳ್ಳಿಯರು!
Views: 101
ಕನ್ನಡ ಕರಾವಳಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣ ಮತ್ತು ಜನದಟ್ಟಣೆ ಇರುವ ದೇವಸ್ಥಾನ, ಜಾತ್ರೆಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚಿನ್ನದ ಕರಿಮಣಿ ಸರಗಳನ್ನು ಕಳವು ಮಾಡುವ ಖತರ್ನಾಕ್ ಕಳ್ಳಿಯರ ಮತ್ತು ಕಳ್ಳರ ಜಾಲ ಹೆಚ್ಚು ಸಕ್ರಿಯವಾಗಿದೆ.
ಕಳ್ಳರು ಮತ್ತು ಕಳ್ಳಿಯರು ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಅಥವಾ ನೂಕುನುಗ್ಗಲಿನ ಲಾಭ ಪಡೆದು ಕ್ಷಣಾರ್ಧದಲ್ಲಿ ಸರಗಳ್ಳತನ ಎಸಗುತ್ತಿದ್ದಾರೆ. ಇಂತಹ ಕೃತ್ಯಗಳ ವಿರುದ್ಧ ಪೊಲೀಸರು ತೀವ್ರ ನಿಗಾ ವಹಿಸುತ್ತಿರುವಾಗಲೇ ಬ್ರಹ್ಮಾವರ ತಾಲೂಕಿನ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ದಿನ ಭಕ್ತರ ಸೋಗಿನಲ್ಲಿ ತೀರ್ಥ ಸ್ವೀಕರಿಸುತ್ತಿದ್ದ ವೇಳೆ ಮಹಿಳೆಯ ಕರಿಮಣಿ ಸರ ಕಳವು ಮಾಡಿ ಪರಾರಿಯಾದ ಬಗ್ಗೆ ವರದಿಯಾಗಿದೆ.
ಭಕ್ತರ ನೂಕು ನುಗ್ಗಲುಗಳ ಮಧ್ಯೆಯೇ ಮಹಿಳೆಯರ ಗ್ಯಾಂಗ್ ಕೃತ್ಯ ಎಸಗಿದ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆಕೈಗೊಂಡಿದ್ದಾರೆ.






