ಇತರೆ

ಬಾವಿಗೆ ಹಾರಿದ್ದ ಮಹಿಳೆ ರಕ್ಷಿಸುವಾಗ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಸಾವು 

Views: 297

ಕನ್ನಡ ಕರಾವಳಿ ಸುದ್ದಿ: ಕೊಲ್ಲಂ ಸಮೀಪದ ನೆಡುವತ್ತೂರಿನಲ್ಲಿ ಬಾವಿಗೆ ಹಾರಿದ್ದ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ನಡೆದ ಅವಘಡದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ನೆಡುವತ್ತೂರಿನ ಅರ್ಚನಾ(ಬಾವಿಗೆ ಹಾರಿದ್ದ ಮಹಿಳೆ), ಆಕೆಯ ಸ್ನೇಹಿತ ಶಿವಕೃಷ್ಣನ್ ಮತ್ತು ಕೊಟ್ಟಾರಕ್ಕರ ಠಾಣೆಯ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿ ಸೋನಿ ಎಸ್. ಕುಮಾರ್ ಮೃತರು.

ಭಾನುವಾರ ಮಧ್ಯರಾತ್ರಿಯ ಸುಮಾರಿಗೆ,ನೆಡುವತ್ತೂರಿನಲ್ಲಿ 80 ಅಡಿ ಆಳದ ಬಾವಿಗೆ ಮಹಿಳೆಯೊಬ್ಬರು ಹಾರಿದ್ದಾರೆ ಎಂದು ಮಾಹಿತಿ ಬಂದಿತು. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಕಾರ್ಯಾಚರಣೆ ಆರಂಭಿಸಿತು. ಕುಮಾರ್ ಅವರು ಸುರಕ್ಷತಾ ಸಾಧನಗಳನ್ನು ಧರಿಸಿ ಬಾವಿಗೆ ಇಳಿಯುತ್ತಿದ್ದಂತೆ, ಬಾವಿಗೆ ಹಾಕಿದ್ದ ತಡೆಗೋಡೆ ಕುಸಿದು ಅರ್ಚನಾ ಮತ್ತು ಕುಮಾರ್‌ ಅವರ ಮೇಲೆ ಬಿದ್ದಿದೆ. ಅದೇ ವೇಳೆ ಹತ್ತಿರದಲ್ಲಿ ನಿಂತಿದ್ದ ಶಿವಕೃಷ್ಣನ್ ಕೂಡ ಬಾವಿಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಮೂವರನ್ನು ಬಾವಿಯಿಂದ ಹೊರತಂದು, ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ವೈಯಕ್ತಿಕ ಸಮಸ್ಯೆಗಳಿಂದಾಗಿ ಅರ್ಚನಾ ಬಾವಿಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

Related Articles

Back to top button
error: Content is protected !!