ಮದರ್ ತೆರೆಸಾ ಪದವಿಪೂರ್ವ ಕಾಲೇಜು: ಮಾದಕ ವಸ್ತುಗಳ ಅಪಾಯ, ಸೈಬರ್ ಭದ್ರತೆ, ರಸ್ತೆ ಸುರಕ್ಷತೆ ಮತ್ತು ಪೋಕ್ಸೋ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಅರಿವು
ಶ್ರದ್ಧೆಯಿಂದ ಶಿಸ್ತಿಗೆ, ನಶಾ ಮುಕ್ತ, ಸುರಕ್ಷಾ, ದೌರ್ಜನ್ಯವಿಲ್ಲದ ಭಾರತದಡೆಗೆ ನಮ್ಮ ಹೆಜ್ಜೆ --- ಜಯರಾಮ್ ಬಿ .ಗೌಡ ಪೊಲೀಸ್ ವೃತ್ತ ನಿರೀಕ್ಷಕರು. ಕುಂದಾಪುರ ವೃತ್ತ

Views: 158
ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ಅಪಾಯ, ಸೈಬರ್ ಭದ್ರತೆ,ರಸ್ತೆ ಸುರಕ್ಷತೆಯ ನಿಯಮಗಳು ಮತ್ತು ಪೋಕ್ಸೋ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ16-07-2025 ರಂದು ಪೊಲೀಸ್ ಇಲಾಖಾ ಅಧಿಕಾರಿ ವರ್ಗದವರ ಸಹಕಾರದೊಂದಿಗೆ ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಂಕರನಾರಾಯಣ ಠಾಣೆಯ ಉಪ ನಿರೀಕ್ಷಕ ತನಿಖಾಧಿಕಾರಿಗಳಾದ ಶ್ರೀಯುತ ಶಂಭುಲಿಂಗಯ್ಯ ಅವರು ಮಾತನಾಡಿ, “ಮಾದಕ ವ್ಯಸನದಿಂದ ದೂರವಿದ್ದು ಜೀವನವನ್ನು ಸಂತೋಷದಿಂದ ಅನುಭವಿಸಿ “ಎಂದು ಹಿತನುಡಿಗಳನ್ನಾಡಿದರು.
ಇಂದು ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದಾಗಿ ಹಾಗೂ ವಿದ್ಯಾರ್ಥಿಗಳ ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ಅನಾಹುತಗಳು,ಮೊಬೈಲ್ ಗೇಮಿಂಗ್ ಅಪಾಯಗಳ ಬಗ್ಗೆ ತಿಳಿ ಹೇಳುವುದರ ಮೂಲಕ ಅದನ್ನು ಹೇಗೆ ಜವಾಬ್ದಾರಿಯಿಂದ ಬಳಸಬೇಕು ಎನ್ನುವುದರ ಕುರಿತು ಶ್ರೀಯುತ ನಾಸಿರ್ ಹುಸೈನ್ ಪೊಲೀಸ್ ಉಪನಿರೀಕ್ಷಕರು(ಕಾನೂನು ಮತ್ತು ಶಿಸ್ತು) ಶಂಕನಾರಾಯಣ ಠಾಣೆ ಇವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಯುತ ಜಯರಾಮ್. ಬಿ. ಗೌಡ ಪೋಲಿಸ್ ವೃತ್ತ ನಿರೀಕ್ಷಕರು ಕುಂದಾಪುರ ವೃತ್ತ ಇವರು, ರಸ್ತೆ ನಿಯಮಗಳ ಉಲ್ಲಂಘನೆಯಿಂದಾಗಿ ಆಗುವ ಅನಾಹುತಗಳ ಬಗ್ಗೆ ಮಾತನಾಡುತ್ತಾ, ನಮ್ಮ ಜೀವದ ರಕ್ಷಣೆಗೆ ರಸ್ತೆ ನಿಯಮಗಳ ಪಾಲನೆ ಅಗತ್ಯ ಎಂದು ತಿಳಿಸುತ್ತಾ ಲೈಸನ್ಸ್ ರಹಿತ ವಾಹನ ಚಾಲನೆ ತಪ್ಪು ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಮತ್ತು ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸುತ್ತ ‘ ಪೋಕ್ಸೋ ಕಾಯ್ದೆ ಮಕ್ಕಳಿಗೆ ಕಾನೂನು ಕವಚ ‘ ಮಕ್ಕಳಿಗೆ ಭಯವಿಲ್ಲದ ಬದುಕು ಕಟ್ಟಿಕೊಡುವುದು ನಮ್ಮ ಕರ್ತವ್ಯವೆಂದು ಹೇಳಿದರು.
ವಿದ್ಯಾದದಾತಿ ವಿನಯಂ, ವಿನಯಾಧ್ಯಾತಿ ಪಾತ್ರತ್ವಂ, ಪಾತ್ರತ್ವಾ ಧನಮಾಪ್ನೋತಿ, ಧನಾಧರ್ಮ ಮಹತಹ ಸುಖಂ!! ಎಂಬ ಸುಭಾಷಿತದ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗಿನ ವಿನಯದ ಮಹತ್ವವನ್ನು ಮನಮುಟ್ಟುವಂತೆ ತಿಳಿಸಿದರು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಮದರ್ ತೆರೇಸಾ ಮೆಮೋರಿಯಲ್ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಉಪನ್ಯಾಸಕ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಈ ವಿಶೇಷ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಶ್ರೀಮತಿ ವೈಶಾಲಿ. ಎಸ್. ಶೆಟ್ಟಿ ನಿರೂಪಿಸಿದರು. ಭಾಷಾ ಹಾಗೂ ಸಾಂಸ್ಕೃತಿಕ ನಿರ್ದೇಶಕಿ ಕುಮಾರಿ ಅಲಿಟಾ ಡೇಸಾರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.