ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು:ಪ್ರತಿಭಾ ಸ್ಪರ್ಧೆ “ಸಿಂಚನ” ಉದ್ಘಾಟನೆ
ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಎತ್ತಿ ಹಿಡಿದು, ಹಿರಿಯವರು ಹಾಕಿಕೊಟ್ಟ ಮಾರ್ಗವನ್ನು ಸದುಪಯೋಗಪಡಿಸಿ, ಕೌಶಲ, ಪ್ರತಿಭೆ ಮತ್ತು ನಿಷ್ಠೆಯನ್ನು ಉದ್ದೀಪನಗೊಳಿಸುವುದರಿಂದ ವಿದ್ಯೆಯ ವರ್ಚಸ್ಸು ಅಧಿಕವಾಗುತ್ತದೆ-----ಶಿಲ್ಪಿ ರಾಜಗೋಪಾಲ್ ಆಚಾರ್ಯ, ಕೋಟೇಶ್ವರ.
Views: 131
ಕನ್ನಡ ಕರಾವಳಿ ಸುದ್ದಿ: ಶಿಸ್ತು, ಸುಸಂಸ್ಕೃತ ನಡವಳಿಕೆ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಎತ್ತಿ ಹಿಡಿಯಬೇಕು ಮತ್ತು ಹಿರಿಯವರು ಹಾಕಿಕೊಟ್ಟ ಮಾರ್ಗವನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರಚಲಿತದಲ್ಲಿ ಸಿಗುವಂತಹ ಅವಕಾಶಗಳ ಸದ್ಬಳಕೆ ಮಾಡಿ ಕೌಶಲ, ಪ್ರತಿಭೆ ಮತ್ತು ನಿಷ್ಠೆಯನ್ನು ಉದ್ದೀಪನಗೊಳಿಸುವುದರಿಂದ ವಿದ್ಯೆಯ ವರ್ಚಸ್ಸು ಅಧಿಕವಾಗುತ್ತದೆ ಎಂದು ರಾಜಗೋಪಾಲ ಆಚಾರ್ಯ ರಥ ಶಿಲ್ಪಿಗಳು ಕೋಟೇಶ್ವರ ಇವರು ಹೇಳಿದರು.
ಅವರು ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರತಿಭಾ ದಿನಾಚರಣೆ ಅಂಗವಾಗಿ ನಡೆದ ಪ್ರತಿಭಾ ಸ್ಪರ್ಧೆ “ಸಿಂಚನ” ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ಧ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಭವಿಷ್ಯದ ಪಯಣದಲ್ಲಿ ಉನ್ನತ ಶಿಖರ ಮುಟ್ಟಬೇಕು ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ವೈಷ್ಣವಿ ಮತ್ತು ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸುಮಶ್ರೀ, ಉಪನ್ಯಾಸಕರು ಕುಂದಾಪುರ, ವಿದೂಷಿ ಶ್ರೀವಿದ್ಯಾ ಸಂದೇಶ, ಭರತನಾಟ್ಯ ಕಲಾವಿದೆ ಉಡುಪಿ ಮತ್ತು ಪ್ರಜ್ಞಾ ಮಾರ್ಪಳ್ಳಿ ಉಪನ್ಯಾಸಕರು ಉಡುಪಿ ನಿರ್ಣಾಯಕರಾಗಿ ಸಹಕರಿಸಿದರು.
ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ಎಂ.ಕಾಂ ತರಗತಿ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು, ಅಂತಿಮ ಬಿ.ಎ. ಮತ್ತು ಬಿ.ಸಿ.ಎ. ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಹಾಗೂ ಬಿ.ಬಿ.ಎ. ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡರು.
ಎಂ.ಕಾಂ ವಿದ್ಯಾರ್ಥಿನಿ ಅಮೃತ ಮತ್ತು ತಂಡದವರು ಪ್ರಾರ್ಥಿಸಿದರು. ಸಾಂಸ್ಕೃತಿಕ ಸಂಚಾಲಕರಾದ ಡಾ. ಶೇಖರ ಬಿ. ಸ್ವಾಗತಿಸಿದರು. ಉಪನ್ಯಾಸಕರಾದ ಡಾ. ಚೇತನಾ ಎಂ., ಜಯಂತಿ ಮತ್ತು ಚೈತ್ರಾ ಹೆಚ್. ಇವರು ನಿರ್ಣಾಯಕರನ್ನು ಪರಿಚಯಿಸಿದರು. ಡಾ. ಭಾಗೀರಥಿ ನಾಯ್ಕ ಸಾಂಸ್ಕೃತಿಕ ಸಂಘದ ಸದಸ್ಯರು ಇವರು ವಂದಿಸಿದರು. ಇತಿಹಾಸ ವಿಭಾಗ ಉಪನ್ಯಾಸಕರಾದ ಶರಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.






