ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ಪರಿಣಾಮಕಾರಿ ವೃತ್ತ ಚಟುವಟಿಕೆ ಹಾಗೂ ಕಥೆ ಹೇಳುವಿಕೆ ಮತ್ತು ಪ್ರಾಥಮಿಕ ಹಂತದ ಆಟ ಆಧಾರಿತ ಕಲಿಕೆಗೆ ಸಂಬಂಧಿಸಿದಂತೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರವನ್ನು ಪ್ರಾರಂಭಿಕ ಬಾಲ್ಯ ಶಿಕ್ಷಣ ಹಾಗೂ ಅಂತರಾಷ್ಟ್ರೀಯ ಫೋನಿಕ್ಸ್ ತರಬೇತುಗಾರ್ಥಿ ಪ್ರಶಿಕ್ಷಕಿ ಶ್ರೀಮತಿ ಲೀನಾ ನ್ಯಾನ್ಸಿ. ಎ. ರವರು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ವೃತ್ತ ಚಟುವಟಿಕೆ ಮತ್ತು ಕಥಾ ಮಾದರಿಯ ಬೋಧನಾ ಕ್ರಮ ಬಹಳ ಮಹತ್ವದ್ದಾಗಿದ್ದು, ಸಂವಾದಾತ್ಮಕ ಕಾರ್ಯಕ್ರಮಗಳ ಮೂಲಕ ಹೊಸ ಹೊಸ ಬೋಧನಾ ತಂತ್ರಗಳನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳ ಬೌದ್ಧಿಕ ಕೌಶಲ್ಯಕ್ಕೆ ಅನುಗುಣವಾಗಿ ಆಸಕ್ತಿದಾಯಕ ಕಲಿಕೆಗೆ ಹೆಚ್ಚು ಒತ್ತುಕೊಟ್ಟು ಶೈಕ್ಷಣಿಕವಾಗಿ ಸಮರ್ಥರಾಗುವಂತೆ ರೂಪಿಸಬೇಕು ಎಂದರು.
ಶಿಕ್ಷಕರು ಬೋಧನಾ ತಂತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಚಟುವಟಿಕೆಗಳಲ್ಲಿ ಭಾಗಿಯಾದರು.ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ರವರು ಕಾರ್ಯಗಾರಕ್ಕೆ ಶುಭ ಕೋರಿದರು. ಪ್ರಾಂಶುಪಾಲರಾದ ಡಾ. ರೂಪ ಶೆಣೈರವರು ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿರವರು ಕಾರ್ಯಕ್ರಮವನ್ನು ನಿರೂಪಿಸಿ,ಸ್ವಾಗತಿಸಿ,ವಂದಿಸಿದರು.