ಕುಂದಾಪುರ: ಮೂವರನ್ನು ರಕ್ಷಿಸಿ ತಾನೇ ಪ್ರಾಣತೆತ್ತ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ್ ಮತ್ತು ಬಾಲಕನ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಹಸ್ತಾಂತರ

Views: 690
ಕುಂದಾಪುರ: ಶಂಕರನಾರಾಯಣ ಮದರ್ ತೆರೇಸಾ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ ಅವರು ಮೇ 29.2023 ರಂದು ಕುಂದಾಪುರ ತಾಲೂಕಿನ ಉಳ್ಳೂರು- ಕಾಡಿನಕೊಂಡ ತಮ್ಮ ಮನೆಯ ಸಮೀಪ ಬೊಬ್ಬರ್ಯನ ಕೊಡ್ಲು ಮದಗಕ್ಕೆ ಇಳಿದು ಮುಳುಗುತ್ತಿರುವ ಮೂವರನ್ನು ಮೇಲಕ್ಕೆತ್ತಿ ಪ್ರಾಣ ರಕ್ಷಣೆ ಮಾಡಿ, ನಂತರ ಶಂಕರನಾರಾಯಣ ಪ್ರೌಢಶಾಲಾ ವಿದ್ಯಾರ್ಥಿ ಭರತ್ ಶೆಟ್ಟಿಗಾರ್ ಶೆಟ್ಟಿಗಾರ್ ಎಂಬ ಬಾಲಕನನ್ನು ರಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಬಾಲಕನೊಂದಿಗೆ ತಾನು ಮದಗದಲ್ಲಿ ಮುಳುಗಿ ಮೃತಪಟ್ಟ ಕಾಳಾವರ ಗ್ರಾಮದ ಶ್ರೀಮತಿ ಸುಮತಿ ಶೆಟ್ಟಿಗಾರ್ ಮಗ ರಾಜೇಂದ್ರ ಶೆಟ್ಟಿಗಾರ್, ಶಂಕರನಾರಾಯಣ ಗ್ರಾಮದ ಸಂಕಪುರ ನಿವಾಸಿ ಶ್ರೀಮತಿ ಸುಮನ ಶೆಟ್ಟಿಗಾರ್ ಮಗ ಭರತ್ ಶೆಟ್ಟಿಗಾರ್ ಈ ಎರಡು ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಣ ವಿತರಿಸಲಾಯಿತು.
ಮಾನ್ಯ ಶಾಸಕರಾದ ಮಂಜುನಾಥ ಭಂಡಾರಿ, ಮಾಜಿ ಶಾಸಕ ಕೆ. ಪ್ರತಾಪ್ ಚಂದ್ರ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಸ್ಥಳೀಯ ಮುಖಂಡರಾದ ಕೋಣಿ ನಾರಾಯಣ ಆಚಾರ್, ವಿಠಲ ಶೆಟ್ಟಿಗಾರ್ ಮೃತರ ಕುಟುಂಬಕ್ಕೆ ಪರಿಹಾರ ನಿಧಿ ಮಂಜೂರು ಮಾಡಿಸುವಲ್ಲಿ ಶ್ರಮಿಸಿದ್ದಾರೆ.
ತೆರೇಸಾ ಶಿಕ್ಷಣ ಸಂಸ್ಥೆಯ ಮಾನವೀಯ ನೆರವು: ಇತ್ತೀಚಿಗೆ ಶಂಕರನಾರಾಯಣ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಿಂದ 50,000 ರೂ, ಇದೇ ಸಂಸ್ಥೆಯ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಂದ 71,000 ರೂ, ರಾಜ್ಯ ಮಟ್ಟದ ಗಣಿತೋತ್ಸವ ಸಂಘದಿಂದ 1,42,386 ರೂ, ರಾಜೇಂದ್ರ ಶೆಟ್ಟಿಗಾರ್ ಅವರ ಶಾಲಾ-ಕಾಲೇಜು, ವಿದ್ಯಾರ್ಥಿಗಳು ಮತ್ತು ಸ್ನೇಹಿತರಿಂದ 1,10,600 ರೂ. ಒಟ್ಟು ಸಂಗ್ರಹಿಸಿದ 3,74,476 ರೂ, ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಅದರಿಂದ ಬರುವ ಮಾಸಿಕ ಬಡ್ಡಿ ಹಣವನ್ನು ರಾಜೇಂದ್ರ ಶೆಟ್ಟಿಗಾರ್ ತಾಯಿಗೆ ನೀಡುವಲ್ಲಿ ಮಾನವೀಯತೆ ಮೆರೆದಿದ್ದಾರೆ.
ಸಹಾಯಧನವನ್ನು ಕುಟುಂಬಕ್ಕೆ ಹಸ್ತಾಂತರಿಸುವಲ್ಲಿ ಸಂಪರ್ಕ ಕೊಂಡಿಯಾಗಿ ಶ್ರಮಿಸಿದ ಸಂಖ್ಯಾಶಾಸ್ತ್ರ ಉಪನ್ಯಾಸಕ ಪ್ರಭಾಕರ ಶೆಟ್ಟಿಗಾರ್ ವಕ್ವಾಡಿ, ಶಂಕರನಾರಾಯಣ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶಮಿತಾ ರಾವ್, ರೆನಿಟಾ ಲೋಬೊ, ಉಪನ್ಯಾಸಕರಾದ ರಸಿಕ್ ಶೆಟ್ಟಿ, ಶಿವರಾಮ್ ಮಂಗಳೂರು, ಯೋಗೀಶ್ ಮೈಸೂರು, ದಿವಂಗತ ರಾಜೇಂದ್ರ ಶೆಟ್ಟಿಗಾರ್ ಅವರ ಮನೆಗೆ ತೆರಳಿ ಸಹಾಯ ಧನದ ಠೇವಣಿ ಪತ್ರವನ್ನು ತಾಯಿಗೆ ಹಸ್ತಾಂತರಿಸಿದರು.








