ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕೈದಿಗಳಿಂದ ಅಧಿಕಾರಿ ಹತ್ಯೆ ಯತ್ನ: ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಕೃತ್ಯ!
Views: 0
ಕನ್ನಡ ಕರಾವಳಿ ಸುದ್ದಿ: ಪರಪ್ಪನ ಅಗ್ರಹಾರ ಕಾರಾಗೃಹದ ವಾರ್ಡರ್ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಆರೋಪದಡಿ ಮಂಗಳೂರಿನ ಬಜರಂಗದಳದ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಐವರು ಆರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕಾರಾಗೃಹದ ಪ್ರಭಾರ ಅಧೀಕ್ಷಕ ಮಂಜುನಾಥ್ ಅವರು ನೀಡಿದ ದೂರಿನ ಮೇಲೆ ಮುಹಮ್ಮದ್ ಮುಜಾಯಿನ್, ಅಬ್ದುಲ್ ಶಫಾನ್, ಮುಹಮ್ಮದ್ ರಿಝಾನ್, ನಯಾಝ್ ಮತ್ತು ಕಲಂದರ್ ಶಫಿ ವಿರುದ್ಧ ಪ್ರಕರಣ ದಾಖಲಾಗಿದೆ.
ತಿಂಗಳ ಹಿಂದೆ ಮುಖ್ಯ ಅಧೀಕ್ಷಕರ ಮೌಖಿಕ ಆದೇಶದ ಮೇರೆಗೆ ಭದ್ರತಾ ವಿಭಾಗದಿಂದ ಅನೆಕ್ಸ್-1 ಕಾರಾಗೃಹಕ್ಕೆ ಜೈಲು ಬಂಧಿಗಳ ವರ್ಗಾವಣೆ ನಡೆದಿತ್ತು. ಆಗ ಕೆಲವು ಜೈಲು ಬಂಧಿಗಳ ವರ್ಗಾವಣೆ ಸಮಯದಲ್ಲಿ ಬಂಧಿಗಳ ವಸ್ತುಗಳನ್ನು ತಪಾಸಣೆ ಮಾಡಿದ್ದ ಮಂಜುನಾಥ್ ಹೆಚ್ಚುವರಿ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಿರಲಿಲ್ಲ. ಆಗ ಆರೋಪಿಗಳು ಮತ್ತು ಕಾರಾಗೃಹದ ವಾರ್ಡರ್ ನಡುವೆ ವಾಗ್ವಾದ ನಡೆದಿದೆ. ಈ ಹಿನ್ನೆಲೆಯಲ್ಲಿ ಜೈಲಿನ ವಾರ್ಡರ್ ಆದ ಮಂಜುನಾಥ್ ಹವೇಲಿ ಅವರು ಕೈದಿಯೊಬ್ಬರ ಮಾಹಿತಿ ಪಡೆಯಲು ಅನೆಕ್ಸ್-1 ಕಾರಾಗೃಹಕ್ಕೆ ಹೋಗಿದ್ದಾಗ ಕೊಲೆ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






