ಸ್ನೇಹಿತನ ಪತ್ನಿ ಕೊಲೆ ಕೇಸ್ನಲ್ಲಿ ಬಂಧನವಾಗಿರೋ ಆರೋಪಿ, ತನ್ನ ಪತ್ನಿ ಕೊಲೆ ಮಾಡಿ ಶವ ಹೂತಿಟ್ಟ ಕೇಸ್ ವಿಚಾರಣೆಯಲ್ಲಿ ಸಿಕ್ಕಿಬಿದ್ದ!

Views: 140
ರಾಮನಗರ: ಸ್ನೇಹಿತನ ಪತ್ನಿಯ ಕೊಲೆ ಕೇಸ್ನಲ್ಲಿ ಬಂಧನವಾಗಿದ್ದ ಆರೋಪಿಯೊಬ್ಬ ತನ್ನ ಪತ್ನಿಯ ಕೊಲೆ ಮಾಡಿ ಶವ ಹೂತಿಟ್ಟ ಕೇಸ್ ವಿಚಾರಣೆಯಲ್ಲಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ.
ಮಾಗಡಿ ತಾಲೂಕಿನ ಹೂಜುಗಲ್ ಗ್ರಾಮದ ನಿವಾಸಿ ಕಿರಣ್ (37) ಸೆರೆಸಿಕ್ಕಿರುವ ಕೊಲೆ ಆರೋಪಿ.
ಕಳೆದ 15 ದಿನಗಳ ಹಿಂದೆ ಬೆಂಗಳೂರಿನ ಮಾದನಾಯಕನಹಳ್ಳಿ ಗ್ರಾಮದ ದಿವ್ಯಾ ಎಂಬ ಗೃಹಿಣಿಯನ್ನು ತಾಲೂಕಿನ ಕುದೂರು ಬಳಿಯ ಚೀಲೂರು ಅರಣ್ಯದಲ್ಲಿ ಕೊಲೆ ಮಾಡಿ, ಮೃತದೇಹವನ್ನು ಅಲ್ಲಿಯೇ ಹೂತಿಟ್ಟು ಪರಾರಿಯಾಗಿದ್ದನು.
ಕೊಲೆ ಆರೋಪಿಗಳಾದ ಶಶಾಂಕ್, ರೋಹಿತ್, ಭರತ್ ಎಂಬುವರನ್ನು ಮಾಗಡಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಗಂಡ ಉಮೇಶ್ ಹಾಗೂ ಆತನ ಸ್ನೇಹಿತ ಕಿರಣ್ ತಲೆಮರೆಸಿಕೊಂಡಿದ್ದರು. 15 ದಿನಗಳ ಹಿಂದೆ ಆರೋಪಿ ಕಿರಣ್ನನ್ನು ಮಾಗಡಿ ಪೊಲೀಸರು ವಶಪಡಿಸಿಕೊಂಡು ಆತನ ಕೌಟುಂಬಿಕ ಹಿನ್ನೆಲೆ ವಿಚಾರಿಸಿದ್ದಾರೆ. ಆಗ ತನ್ನ ಪತ್ನಿಯನ್ನು 5 ವರ್ಷಗಳ ಹಿಂದೆ ತಾನೆ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಣೆಯಾಗಿದ್ದಾಳೆಂದು ಎಲ್ಲರನ್ನು ನಂಬಿಸಿದ್ದ ಆರೋಪಿ – 2019ರಲ್ಲಿ ಆರೋಪಿ ಕಿರಣ್ ತನ್ನ ಪತ್ನಿ ಪೂಜಾಳ (28) ಶೀಲ ಶಂಕಿಸಿ ಕೊಲೆ ಮಾಡಿ ಮಾಗಡಿಯ ಹೂಜಗಲ್ ಅರಣ್ಯ ಪ್ರದೇಶದಲ್ಲಿ ಶವವನ್ನು ಹೂತಿಟ್ಟು ಸೈಲೆಂಟ್ ಆಗಿದ್ದನು. ಬಳಿಕ ಪೂಜಾ ನಾಪತ್ತೆಯಾಗಿದ್ದಾಳೆಂದು ಕುಟುಂಬಸ್ಥರನ್ನು ನಂಬಿಸಿಕೊಂಡು ಬಂದಿದ್ದನು. ದಿವ್ಯಾ ಕೊಲೆ ಕೇಸ್ನಲ್ಲಿ ಮಾಗಡಿ ಪೊಲೀಸರು ಕಿರಣ್ ವಿಚಾರಣೆ ಮಾಡುವ ವೇಳೆ ಕುಟುಂಬದ ಹಿನ್ನೆಲೆ ವಿಚಾರಿಸಿದಾಗ ತನಗೆ ಹೆಂಡತಿ ಇದ್ದಾಳೆ, ಅವಳು 5 ವರ್ಷದ ಹಿಂದೆ ನಾಪತ್ತೆಯಾಗಿದ್ದಾಳೆ. ಈ ಸಂಬಂಧ ನಾನು ಮತ್ತು ನನ್ನ ಊರಿನ ಕೆಲವರು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ಹೇಳಿಕೆ ನೀಡಿದ್ದನು. ಪ್ರಕರಣದ ಹಿನ್ನೆಲೆ ಪರಿಶೀಲಿಸಿದ ಪೊಲೀಸರಿಗೆ ಯಾವುದೇ ದೂರು ದಾಖಲಾಗದಿರುವುದು ಗೊತ್ತಾಗಿದೆ. ಇದೀಗ ಸ್ನೇಹಿತನ ಪತ್ನಿ ಕೊಲೆ ಕೇಸ್ನಲ್ಲಿ ಬಂಧನವಾಗಿರೋ ಆರೋಪಿ, ತನ್ನ ಪತ್ನಿ ಕೊಲೆ ಮಾಡಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.
ಪತ್ನಿ ದೇಹವನ್ನ ಎರಡು ವರ್ಷಗಳ ನಂತರ ಸುಟ್ಟಿದ್ದ ಆರೋಪಿ : 2019ರಲ್ಲಿ ಆರೋಪಿ ಕಿರಣ್ ತನ್ನ ಹೆಂಡತಿಯನ್ನು ಕೊಲೆ ಮಾಡಿ ದೇಹವನ್ನು ಹೂತಿಟ್ಟಿದ್ದ. ಆದರೆ ಎರಡು ವರ್ಷಗಳ ನಂತರ ಸಿನಿಮಾವೊಂದನ್ನು ನೋಡಿದ ಆತ ಶವವನ್ನು ಮಣ್ಣಿನಲ್ಲಿ ಹೂತ್ತಿಟ್ಟರೆ ಯಾವತ್ತಿದ್ದರೂ ಸಿಕ್ಕಿಹಾಕಿಕೊಳ್ಳುತ್ತೇನೆ ಎಂದು ಹೆದರಿದ್ದಾನೆ. ಬಳಿಕ ಸಿನಿಮಾ ರೀತಿಯಲ್ಲಿ ಎರಡು ವರ್ಷಗಳ ನಂತರ ಪತ್ನಿಯ ಹೆಣವನ್ನು ಭೂಮಿಯಿಂದ ಹೊರತೆಗೆದು, ಎರಡು ದಿನಗಳ ಕಾಲ ಸುಟ್ಟುಹಾಕಿರುವುದಾಗಿ ವಿಚಾರಣೆ ವೇಳೆ ಕಿರಣ್ ತಿಳಿಸಿದ್ದಾನೆ.
ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಸ್ಥಳ ಮಹಜರು ಮಾಡಿ, ಕಳೇಬರ ಹಾಗೂ ಹಲ್ಲು ಮೂಳೆಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ವೇಳೆ ತಹಶೀಲ್ದಾರ್ ಡಿ ಪಿ ಶರತ್ಕುಮಾರ್ ಸಹ ಇದ್ದರು. ಈ ಕೊಲೆಗೆ ಸಂಬಂಧಿಸಿದಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕೊಲೆ ಪ್ರಕರಣ ದಾಖಲಿಸಲಾಗಿದೆ.






