ಉಡುಪಿ:ಪೆರಂಪಳ್ಳಿಯ ಮನೆಯಂಗಳದಲ್ಲಿ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯ ಸೆರೆ

Views: 137
ಉಡುಪಿ :ಮನೆಯ ಅಂಗಳದಲ್ಲಿ ಚಿರತೆಯೊಂದು ಕಾಣಿಸಿಕೊಂಡ ಘಟನೆ ಉಡುಪಿ ಪೆರಂಪಳ್ಳಿಯಲ್ಲಿ ಶುಕ್ರವಾರ(ಜು.27)ರಂದು ತಡರಾತ್ರಿ ನಡೆದಿದೆ.
ಮನೆಯಂಗಳದಲ್ಲಿ ಮಲಗಿದ್ದ ನಾಯಿಯ ಬೇಟೆಗಾಗಿ ಚಿರತೆ ಬಂದಿದ್ದು, ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯ ಮತ್ತು ಚಿರತೆ ಓಡಾಟದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೆಲವು ದಿನಗಳಿಂದ ಮಣಿಪಾಲ ಆಸುಪಾಸಿನಲ್ಲಿ ಚಿರತೆ ಓಡಾಟದ ಮಾಹಿತಿ ತಿಳಿದಿದ್ದ ಮನೆಯವರು ಸುಮ್ಮನಿದ್ದರು ಎನ್ನಲಾಗಿದೆ.ನಾಯಿ ಬೊಗಳುವ ಶಬ್ದ ಕೇಳಿದರೂ ಮನೆಯವರು ಹೊರಗೆ ಬರಲಿಲ್ಲ ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದ ಕೂಡ ಕೇಳಿರಲಿಲ್ಲ. ಬೆಳಿಗ್ಗೆ ಮನೆಯ ಸಿಸಿಟಿವಿ ದ್ರಶ್ಯಾವಳಿ ಗಮನಿಸಿದಾಗ ಚಿರತೆ ನಾಯಿಯ ಹಿಂದೆ ಹೋಗುತ್ತಿರುವ ದೃಶ್ಯ ಕಂಡು ಮನೆಮಂದಿ ಭಯಭೀತರಾಗಿದ್ದಾರೆ.
ರಾತ್ರಿ ಇಡೀ ಕಣ್ಮರೆಯಾಗಿದ್ದ ಸಾಕು ನಾಯಿ ಬೆಳಿಗ್ಗೆ ಪ್ರತ್ಯಕ್ಷವಾಗಿದೆ. ಚಿರತೆಯ ಬಾಯಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದೆ. ಈ ಘಟನೆ ಮಣಿಪಾಲ, ಪೆರಂಪಳ್ಳಿ ಭಾಗದಲ್ಲಿ ಆತಂಕ ಸೃಷ್ಟಿಸಿದೆ.ಇಲ್ಲಿನ ಜನರು ಎಚ್ಚೆತ್ತುಕೊಂಡು ಕೂಡಲೇ ಅರಣ್ಯ ಇಲಾಖೆಗೆ ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.






