ವಿದ್ಯಾರ್ಥಿಗೆ ದಂಡ, ಕಾಲೇಜು ಫೀ ಕಟ್ಟಲು ಹಣವಿಲ್ಲದೇ ಅಳುತ್ತಿದ್ದ ವಿದ್ಯಾರ್ಥಿಗೆ ಸ್ವಂತ ಹಣ ನೀಡಿ ಮಾನವೀಯತೆ ಮೆರೆದ ಪಿಎಸ್ಐ

Views: 317
ಸಂಚಾರಿ ನಿಯಮ ಉಲ್ಲಂಘಿಸಿ, ದಂಡ ಕಟ್ಟಿದ ವಿದ್ಯಾರ್ಥಿಗೆ ನಗರ ಠಾಣೆಯ ಪಿಎಸ್ಐ ಎಸ್.ಆರ್.ನಾಯಕ ತಮ್ಮ ಕೈಯಿಂದ ಹಣ ಕೊಟ್ಟು ಮಾನವೀಯತೆ ಮೆರೆದ ಘಟನೆ ಇಳಕಲ್ ನಲ್ಲಿ ನಡೆದಿದೆ.
ವಾಹನಗಳ ತಪಾಸಣೆ ಮಾಡುತ್ತಿದ್ದ ನಗರ ಠಾಣೆಯ ಮಹಿಳಾ ಪಿಎಸ್ಐ ಎಸ್.ಆರ್.ನಾಯಕ ಅವರು ಮೂವರು ವಿದ್ಯಾರ್ಥಿಗಳು ಬೈಕ್ನಲ್ಲಿ ಹೋಗುತ್ತಿದ್ದನ್ನು ಗಮನಿಸಿ, ಬೈಕ್ ತಡೆದು ದಂಡ ಹಾಕಿದರು. ಕಾಲೇಜು ಫೀ ಕಟ್ಟಲು ಪಾಲಕರು ಕೊಟ್ಟ ಹಣದಲ್ಲಿ ಆ ವಿದ್ಯಾರ್ಥಿ ಹಣ ದಂಡ ಕಟ್ಟಿದ. ಫೀ ಕಟ್ಟಬೇಕಿದ್ದ ಹಣ ದಂಡ ಕಟ್ಟಲು ಖರ್ಚಾಗಿದ್ದಕ್ಕೆ ಆ ವಿದ್ಯಾರ್ಥಿ ಅಲ್ಲಿಂದ ತೆರಳದೇ ರಸ್ತೆ ಬದಿ ನಿಂತು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.
ಪಿಎಸ್ಐ ನಾಯಕ ಅಳುತ್ತಿದ್ದ ಆ ವಿದ್ಯಾರ್ಥಿಯನ್ನು ಕರೆದು ಮಾತನಾಡಿಸಿ ಸಮಸ್ಯೆಯನ್ನು ಆಲಿಸಿದರು.ದಂಡ ಕಟ್ಟಿದ ನಂತರ ಕಾಲೇಜು ಪ್ರವೇಶಕ್ಕೆ ಕಟ್ಟಬೇಕಿರುವ ಶುಲ್ಕದಷ್ಟು ಹಣ ಉಳಿದಿಲ್ಲ. ಮನೆಯಲ್ಲಿ ಬೈಯುತ್ತಾರೆ, ಕಾಲೇಜು ಫೀ ಕಟ್ಟಲು ಏನು ಮಾಡಬೇಕು ತಿಳಿಯುತ್ತಿಲ್ಲ ಎಂದು ಕಣ್ಣೀರು ಹಾಕಿದ.
ವಿದ್ಯಾರ್ಥಿ ಅಳುತ್ತಿರುವುದನ್ನು ನೋಡಲಾಗದ ಪಿಎಸ್ಐ ಅವರು ತಮ್ಮ ಕೈಯಿಂದಲೇ ರೂ.200 ತೆಗೆದು ಕೊಟ್ಟರು. ಅಳುತ್ತಿದ್ದ ವಿದ್ಯಾರ್ಥಿಯನ್ನು ಸಂತೈಸಿದರು. ಹೋಗು ಕಾಲೇಜು ಫೀ ಕಟ್ಟು ಚೆನ್ನಾಗಿ ಓದು, ಒಳ್ಳೆಯವನಾಗಿರಬೇಕು. ಯಾವತ್ತೂ ಸಂಚಾರಿ ನಿಯಮ ಉಲ್ಲಂಘಿಸಬಾರದು ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ಈ ವಿಡಿಯೋ ವೈರಲ್ ಆಗಿದೆ. ಪಿಎಸ್ಐ ವಿದ್ಯಾರ್ಥಿಯ ಬಗ್ಗೆ ತೋರಿದ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.






