ಭೀಕರ ಅಪಘಾತ :ಹಾಲಿನ ಟ್ಯಾಂಕರ್-ಬಸ್ ಡಿಕ್ಕಿ, 18 ಮಂದಿ ದುರ್ಮರಣ

Views: 140
ಲಖನೌ: ಬಸ್ ಮತ್ತು ಹಾಲಿನ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ 18ಮಂದಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ವುನ್ನಾವೊ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.ಲಖನೌ-ಆಗ್ರಾ ಎಕ್ಸ್ಪ್ರೆಸ್ ವೇ ನಲ್ಲಿ ಬಿಹಾರದ ಶಿವಘಡದಿಂದ ದೆಹಲಿಗೆ ತೆರಳುತ್ತಿದ್ದ ಸ್ಲೀಪರ್ ಬಸ್ ಬೆಹತಾ ಮುಜಾವರ್ ಪೊಲೀಸ್ ಠಾಣಾ ವ್ಯಾಪ್ತಿತ ಏರ್ಸ್ಟ್ರಿಪ್ನಲ್ಲಿ ಟ್ಯಾಂಕರ್ಗೆ ಅಪ್ಪಳಿಸಿ ಈ ಭೀಕರ ದುರಂತ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಟ್ಯಾಂಕರ್ ಹಾರಿ ಹೋಗಿದ್ದು, ಅಪಘಾತದ ಭೀಕರತೆಯ ಸನ್ನಿವೇಶಕ್ಕೆ ಇದು ಸಾಕ್ಷಿಯಾಗಿತ್ತು.ಅಪಘಾತದಲ್ಲಿ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಹಾರ ಕಾರ್ಯ ಕೈಗೊಂಡರು.ಹಿರಿಯ ಪೊಲೀಸ್ ಅಧಿಕಾರಿ ಅರವಿಂದ್ಚೌವರಾಸಿಯಾ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬಸ್ ಬಿಹಾರದ ಸೀತಾಮರ್ಹಿಯಿಂದ ದೆಹಲಿಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.






