ಅಧಿಕಾರ ಹಸ್ತಾಂತರ ಮುಸುಕಿನ ಗುದ್ದಾಟ ನಡುವೆಯೂ ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್..!
Views: 53
ಕನ್ನಡ ಕರಾವಳಿ ಸುದ್ದಿ: ಅಧಿಕಾರ ಹಸ್ತಾಂತರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಇಬ್ಬರು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ವಿಶ್ವ ಮೀನುಗಾರಿಕೆ ದಿನಾಚರಣೆ -2025 ನಿಮಿತ್ತ ಹೆಬ್ಬಾಳದಲ್ಲಿ ಮತ್ಸ್ಯ ಮೇಳ ನಡೆಯುತ್ತಿದೆ. ನವೆಂಬರ್ 21 ರಿಂದ ಆರಂಭವಾಗಿರುವ ಈ ಕಾರ್ಯಕ್ರಮವು ನಾಳೆಯವರೆಗೆ ನಡೆಯಲಿದೆ. ನಿಗದಿಯಂತೆ ಇವತ್ತಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಆಗಮಿಸಿದ್ದಾರೆ.
ಕಳೆದ ಮುರ್ನಾಲ್ಕು ದಿನಗಳಿಂದ ಕರ್ನಾಟಕ ಕಾಂಗ್ರೆಸ್ನಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಈ ಕ್ಷಿಪ್ರ ರಾಜಕೀಯ ಕ್ರಾಂತಿ ಬೆನ್ನಲ್ಲೇ ಕಳೆದ ಎರಡು ದಿನಗಳಿಂದ ಡಿಕೆ ಶಿವಕುಮಾರ್ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಸಾರ್ವಜನಿಕವಾಗಿ ಎಲ್ಲಿಗೂ ಹೋಗಿರಲಿಲ್ಲ. ನಿನ್ನೆ ಸಂಜೆ ವೇಳೆಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿರೋದು ಬಿಟ್ಟರೆ ಬೇರೆ ಎಲ್ಲಿಗೂ ಹೋಗಿರಲಿಲ್ಲ. ಹೀಗಾಗಿ ಇವತ್ತು ನಡೆಯುವ ಕಾರ್ಯಕ್ರಮಕ್ಕೆ ಶಿವಕುಮಾರ್ ಆಗಮಿಸೋದಿಲ್ಲ. ಸಿಎಂ ಅವರಿಂದ ಅಂತರ ಕಾಪಾಡಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಅದನ್ನು ಶಿವಕುಮಾರ್ ಸುಳ್ಳಾಗಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಕೆಲವು ಅಹಿತಕರ ಬೆಳವಣಿಗೆಯನ್ನು ಗಮನಿಸಿದ್ದ ಮೀನುಗಾರಿಕೆ ಸಚಿವ ಮಂಕಾಳು ವೈದ್ಯ, ಖುದ್ದು ಡಿಕೆ ಶಿವಕುಮಾರ್ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿದ್ದರು. ಭೇಟಿ ವೇಳೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೂ ಡಿಕೆ ಶಿವಕುಮಾರ್, ಸಿಎಂ ಜೊತೆ ವೇದಿಕೆ ಹಂಚಿಕೊಳ್ಳೋದು ಅನುಮಾನ ಎನ್ನಲಾಗಿತ್ತು.
ನಾನು ಯಾವುದೇ ಗುಂಪುಗಾರಿಕೆ ಮಾಡಿಲ್ಲ. ಮಾಡೋದೂ ಇಲ್ಲ. ನಾನು 140 ಶಾಸಕರ ಅಧ್ಯಕ್ಷ ಎಂದಿದ್ದ ಶಿವಕುಮಾರ್, ಇವತ್ತು ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಲ್ಲದೇ ಸಿಎಂ ಜೊತೆ ಹೆಜ್ಜೆ ಹಾಕಿದರು. ಜೊತೆಗೆ ವೇದಿಕೆ ಮೇಲೆ ಮುಖ್ಯಮಂತ್ರಿಗಳ ಜೊತೆ ಗಾಢ ಚರ್ಚೆಯಲ್ಲಿ ಇರೋದು ಕಂಡು ಬಂದಿದೆ. ಆ ಮೂಲಕ ಪಕ್ಷದ ಕಾರ್ಯಕರ್ತರಿಗೆ, ವಿರೋಧಿಗಳಿಗೆ ಡಿಸಿಎಂ ಹೊಸ ಸಂದೇಶ ರವಾನಿಸಿದ್ದಾರೆ.






