ಡಿಸಿಎಂ ಡಿಕೆಶಿ ಮತ್ತೆ ದೆಹಲಿಗೆ..ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ!
Views: 5
ಕನ್ನಡ ಕರಾವಳಿ ಸುದ್ದಿ: ಸಿಎಂ ಕುರ್ಚಿ ಏರಲು ಡಿಸಿಎಂ ಡಿಕೆ ಶಿವಕುಮಾರ್, ಡೆಲ್ಲಿಗೆ ಹೋಗಿ ರಿಟರ್ನ್ ಆಗಿದ್ರು ಬರಿಗೈಯಲ್ಲಿ ಬಂದಿದ್ದ ಡಿಕೆಶಿ, ಮತ್ತೆ ಡೆಲ್ಲಿ ಫ್ಲೈಟ್ ಹತ್ತಲು ಸಜ್ಜಾಗಿದ್ದಾರೆ.
ರಾಜ್ಯ ರಾಜಕಾರಣದ ಗಮನ ಈಗ ದೆಹಲಿಯತ್ತ ನೆಟ್ಟಿದೆ. ಡಿ.ಕೆ. ಶಿವಕುಮಾರ್ ಅವರ ಈ ‘ದೆಹಲಿ ಯಾತ್ರೆ’ ಹೈಕಮಾಂಡ್ ಭೇಟಿ, ಕರ್ನಾಟಕದ ಮುಖ್ಯಮಂತ್ರಿ ಕುರ್ಚಿ ಬದಲಾವಣೆಗೆ ಮುನ್ನುಡಿ ಬರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕಲಬುರಗಿಯ ಚಿತ್ತಾಪುರದಲ್ಲಿ ಭಾನುವಾರ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಕಲಬುರಗಿಯಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನೀರಾವರಿ ಇಲಾಖೆಯ ಕೆಲವು ಕೆಲಸಗಳ ಬಗ್ಗೆ ಚರ್ಚಿಸಲು ದೆಹಲಿಗೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಮುನ್ನೆಲೆಗೆ ಬಂದ ವೇಳೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಇತ್ತ ಮೈಸೂರು ತಾಲ್ಲೂಕು ಪಿಲ್ಲಹಳ್ಳಿ ಗ್ರಾಮದ ಹೆಲಿಪ್ಯಾಡ್ನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಯಾರೋ ಏನೋ ಹೇಳುತ್ತಾರೆ ಎಂಬುದು ನನಗೆ ಮುಖ್ಯ ಅಲ್ಲ. ನನಗೆ ಹೈಕಮಾಂಡ್ ತೀರ್ಮಾನವಷ್ಟೇ ಮುಖ್ಯ. ಮೈಸೂರಿನ ಜನರಷ್ಟೇ ಅಲ್ಲ, ಇಡೀ ನಾಡಿನ ಜನರು ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಆದರೆ, ಅಂತಿಮ ತೀರ್ಮಾನ ಮಾಡುವುದು ಹೈಕಮಾಂಡ್. ಹೈಕಮಾಂಡ್ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ’ ಎಂದು ಹೇಳಿದರು.






