ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್

Views: 35
ಕನ್ನಡ ಕರಾವಳಿ ಸುದ್ದಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು.
ಬೆಂಗಳೂರಿನಿಂದ ಬೆಳಗಾವಿ, ಅಮೃತಸರದಿಂದ ಮಾತಾ ವೈಷ್ಣೋದೇವಿ ಕತ್ರಾ ಮತ್ತು ನಾಗ್ಪುರ (ಅಜ್ನಿ) ದಿಂದ ಪುಣೆ ಹೋಗುವ ಮೂರು ವಂದೇ ಭಾರತ್ಗೆ ಹಸಿರು ನಿಶಾನೆ ತೋರಿದರು. ಈ ಹೈಸ್ಪೀಡ್ ರೈಲುಗಳು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲಿದೆ. ಬಹುನಿರೀಕ್ಷಿತ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ರಾಜ್ಯದ 11ನೇ ಹೊಸ ವಂದೇ ಭಾರತ್ ರೈಲು ಸೇವೆಯಾಗಿದೆ. ಬೆಳಗಾವಿ-ಬೆಂಗಳೂರು ಮಾರ್ಗವನ್ನು ಈ ವಂದೇ ಭಾರತ್ ರೈಲು ಸುಮಾರು 8.50 ಗಂಟೆಗಳಲ್ಲಿ ಕ್ರಮಿಸಲಿದೆ.
ವಿದ್ಯಾರ್ಥಿಗಳ ಜೊತೆ ಸಂವಾದ : ಇದೇ ವೇಳೆ ನೂತನ ವಂದೇ ಭಾರತ್ ರೈಲು ಒಳಗೆ ಹೆಜ್ಜೆ ಹಾಕಿದ ಪ್ರಧಾನಿ ಮೋದಿ ಅವರು ಕೂತಿದ್ದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಖುಷಿ ಹಂಚಿಕೊಂಡರು. ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಿ. ಸೋಮಣ್ಣ, ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದ ಪಿ. ಸಿ. ಮೋಹನ್ ಉಪಸ್ಥಿತರಿದ್ದರು.
ವಾರದಲ್ಲಿ 6 ದಿನ ಸಂಚಾರ: ಬುಧವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ವಂದೇ ಭಾರತ್ ಬೆಂಗಳೂರು-ಬೆಳಗಾವಿ ಸಂಚರಿಸಲಿದೆ. ಪ್ರತಿದಿನ ಬೆಳಗ್ಗೆ 5.20ಕ್ಕೆ ಬೆಳಗಾವಿಯಿಂದ ಹೊರಡಲಿರುವ ವಂದೇ ಭಾರತ್ ಮಧ್ಯಾಹ್ನ 1.50ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣಕ್ಕೆ ತಲುಪಲಿದೆ. ಮತ್ತೆ ಮಧ್ಯಾಹ್ನ 2.20ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ವಾಪಸ್ ಹೊರಡಲಿದ್ದು, ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಲುಗಡೆ ಎಲ್ಲೆಲ್ಲಿ? ಬೆಳಗಾವಿಯಿಂದ ಬರುವಾಗ ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ದಾವಣಗೆರೆ, ತುಮಕೂರು, ಯಶವಂತಪುರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 2.28ಕ್ಕೆ ಹೊರಟು ಯಶವಂತಪುರ, ತುಮಕೂರು, ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ನಿಲುಗಡೆಯಾಗಲಿದೆ.
ದರ ಹೀಗಿದೆ: ಸುಮಾರು 8 ಜಿಲ್ಲೆಗಳನ್ನು ಹಾದು ಹೋಗುವ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು 8 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 4 ಮೋಟಾರ್ ಕಾರ್, 1 ಟ್ರೈಲಿಂಗ್ ಕಾರ್, 1 ಎಕ್ಸಿಕ್ಯುಟಿವ್ ಕ್ಲಾಸ್/ಟ್ರೈಲಿಂಗ್ ಕಾರ್ ಮತ್ತು 2 ಡ್ರೈವಿಂಗ್ ಟ್ರೈಲರ್ ಕಾರ್ಗಳನ್ನು ಹೊಂದಿರಲಿದೆ. ಬೆಂಗಳೂರು-ಬೆಳಗಾವಿ ಚೇರ್ ಕಾರ್ (ಸಿಸಿ) ಟಿಕಿಟ್ ದರ 1,264 ರೂ. ಹಾಗೂ ಎಕ್ಸಿಕ್ಯುಟಿವ್ ಚೇರ್ ಕಾರ್ (ಇಸಿ) ಟಿಕೆಟ್ ದರ 2,535 ರೂ. ಇರಲಿದೆ.






