ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಅಸ್ತಿಪಂಜರಗಳು ಪತ್ತೆ

Views: 226
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಶವ ಹೂತ ಪ್ರಕರಣದ ಬಂಗ್ಲೆಗುಡ್ಡದ ರಹಸ್ಯವನ್ನು ಭೇದಿಸಲು ಎಸ್ಐಟಿ ತಂಡವು ಇಂದು ದಟ್ಟಾರಣ್ಯದಲ್ಲಿ ಶೋಧ ಕಾರ್ಯಾಚರಣೆಗೆ ನಡೆಸಿದೆ. ನೇತ್ರಾವತಿ ನದಿಯ ತೀರದಿಂದಲೇ ಶೋಧ ಆರಂಭಿಸಿ, ಬಂಗ್ಲೆಗುಡ್ಡದ ಒಂದು ಮಗ್ಗುಲಿನ ಮೂಲಕ ಕಾಡು ಪ್ರವೇಶಿಸಿದ ತಂಡ, 50ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಶೋಧ ನಡೆಸಿದ್ದಾರೆ.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ, SOCO ತಂಡ, ಕಂದಾಯ ಇಲಾಖೆ, ಫಾರೆನ್ಸಿಕ್ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಭಾಗವಹಿಸಿದೆ. ಮೆಟಲ್ ಡಿಟೆಕ್ಟರ್ಗಳೊಂದಿಗೆ ಸೋಕೋ ತಂಡ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಹ ಆಗಮಿಸಿದ್ದಾರೆ.
ಸೌಜನ್ಯ ಮಾವ ವಿಠಲ್ ಗೌಡ ಇತ್ತಿಚೆಗೆ ವಿಡಿಯೋ ಹರಿಬಿಟ್ಟು ಎಸ್ಐಟಿ ತನಿಖೆಯ ವೇಳೆ 7 ಮಾನವ ಮೃತದೇಹಗಳು ಪತ್ತೆಯಾಗಿದೆ ಎಂದಿದ್ದರು. ಈ ಹೇಳಿಕೆ ಮತ್ತೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಎಸ್ಐಟಿ ಶೋಧ ಕಾರ್ಯ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಅಸ್ತಿಪಂಜರಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಎಸ್ಐಟಿ ಅಧಿಕಾರಿಗಳು ಬುಧವಾರ ಬಂಗ್ಲೆಗುಡ್ಡದಲ್ಲಿ ಪರಿಶೀಲನೆ ಆರಂಭಿಸಿದ್ದು, ಈ ಹಿಂದೆ ಸಾಕ್ಷಿ ದೂರುದಾರ ಗುರುತಿಸಿದ 11ನೇ ಸ್ಥಳದ ಸಮೀಪವೇ ಅಸ್ತಿ ಪಂಜರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಪತ್ತೆಯಾಗಿರುವ ಮೂಳೆಗಳನ್ನು ಎಸ್ಐಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಅರಣ್ಯದ ಒಳಭಾಗದಲ್ಲೂ ಎಸ್.ಐ.ಟಿ ಶೋಧ ಕಾರ್ಯ ಮುಂದುವರಿಸಿದ್ದು ಏನೆಲ್ಲ ಪತ್ತೆಯಾಗಿವೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ.






