ಕೋಟೇಶ್ವರದಲ್ಲಿ ಬೃಹತ್ ಹಿಂದು ಸಂಗಮ
Views: 215
ಕನ್ನಡ ಕರಾವಳಿ ಸುದ್ದಿ: ಹಿಂದೂ ಸಂಗಮ ಆಯೋಜನ ಸಮಿತಿ ಕುಂದಾಪುರ,ಕೋಟೇಶ್ವರ ಮಂಡಲ ವತಿಯಿಂದ ಜ. 26ರಂದು ಕೋಟೇಶ್ವರ ಕುರುಕ್ಷೇತ್ರ ಗದ್ದೆಯಲ್ಲಿ ಬೃಹತ್ ಹಿಂದು ಸಂಗಮ ಕಾರ್ಯಕ್ರಮ ವೈಭವದಿಂದ ನಡೆಯಿತು.
ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕರಾಗಿ ಮಂಗೇಶ್ ಬೇಂಡೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಸ್ವರ್ಗದಂತಿರುವ ಭಾರತದ ಪುಣ್ಯಭೂಮಿಯಲ್ಲಿ ಎಲ್ಲರ ಉದ್ಧಾರ ಆಗಬೇಕಾದರೆ ನಿಮ್ಮ ಉದ್ದಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಕುಂದಾಪುರ ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕೋಟೇಶ್ವರ ಪಟ್ಟಾಭಿ ರಾಮಚಂದ್ರ ದೇಗುಲದ ಮಾಜಿ ಧರ್ಮದರ್ಶಿ ಶ್ರೀಧರ್ ಕಾಮತ್, ವಿಶ್ರಾಂತ ಮುಖ್ಯ ಶಿಕ್ಷಕಿ ಇಂದ್ರಾಕ್ಷಿ ಉಡುಪ ಉಪಸ್ಥಿತರಿದ್ದರು.
ವಕ್ವಾಡಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಚಂಡೆ ಬಳಗ, ಭಜನಾ ತಂಡ ವಿವಿಧ ಆಕರ್ಷಣೆಗಳೊಂದಿಗೆ ನಡೆದ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಮೆರಗು ತಂದಿದೆ.
ಬೃಹತ್ ಮಟ್ಟದ ಶೋಭಾ ಯಾತ್ರೆ ನಡೆಸಿ, ಕಾರ್ಯಕ್ರಮ ಆರಂಭದ ಮುನ್ನ ಗೋವುಗಳಿಗೆ ಪೂಜೆ ನೆರವೇರಿಸಿ ನಂತರ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು.
ಸುರೇಂದ್ರ ಮಾರ್ಕೋಡು ಸ್ವಾಗತ ಪರಿಚಯಿಸಿದರು. ಶಂಕರ ಅಂಕದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ರಕ್ಷಾ ಗೋಪಾಡಿ ವೈಯಕ್ತಿಕ ಗೀತೆ ಹಾಡಿದರು, ನಯನ ಸತೀಶ್ ದೊಡ್ಡೋಣೆ ವಂದಿಸಿದರು.












