ಕುಂದಾಪುರ:ತಲ್ಲೂರು ಬಳಿ ಬಸ್ಸಿಗೆ ಹಿಂದಿನಿಂದ ಲಾರಿ ಡಿಕ್ಕಿ,ವಿದ್ಯಾರ್ಥಿ ಗಂಭೀರ, ಹಲವರಿಗೆ ಗಾಯ

Views: 192
ಕುಂದಾಪುರ: ಬೈಂದೂರಿನಿಂದ ಕುಂದಾಪುರದತ್ತ ಬರುತ್ತಿದ್ದ ಖಾಸಗಿ ಬಸ್ಸಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದು ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ತಲ್ಲೂರು ಪ್ರವಾಸಿ ಬಳಿ ಶನಿವಾರ ನಡೆದಿದೆ.
ಅಪಘಾತದ ತೀವ್ರತೆಗೆ ಬಸ್ ಹಿಂಭಾಗ ಮತ್ತು ಲಾರಿ ಮುಂಭಾಗ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಸಾದ್ ಎಂಬಾತ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅದೇ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಪೂಜಾರಿ, ದೀಪಶ್ರೀ, ತನುಷ್, ಪ್ರೀತಮ್ ಮತ್ತು ಕೋಟ ಆಶ್ರಿತಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಅಶ್ಮಿತಾ ಹಾಗೂ ಅಶ್ವಿನಿ, ಇತರ ಪ್ತಯಾಣಿಕರಾದ ಶಿವರಾಂ, ವಿದ್ಯಾ, ಸತೀಶ್, ದೀಪ ಹಾಗೂ ಸುಕ್ರ ಎಂಬುವರು ಸಣ್ಣ ಪುಟ್ಟ ಗಾಯಗಳಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸ್ಸಿನ ಚಾಲಕ ತಲ್ಲೂರು ಸಮೀಪದ ಪ್ರವಾಸಿ ಪೆಟ್ರೋಲ್ ಬಂಕ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ತಯಾಣಿಕರೊಬ್ಬರನ್ನು ಹತ್ತಿಸಿಕೊಳ್ಳಲು ಬಸ್ ನಿಲ್ಲಿಸಿದ್ದಾನೆ. ಪ್ರಯಾಣಿಕ ಬಸ್ ಹತ್ತಿದ ಕೂಡಲೇ ಯಾವುದೇ ಮುನ್ಸೂಚನೆ ನೀಡದೇ ಬಸ್ಸನ್ನು ಚಲಾಯಿಸಿದ್ದಾನೆ. ಇದೇ ಸಂದರ್ಭ ಹಿಂದುಗಡೆಯಿಂದ ಸರಕು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಚಾಲಕ ಬ್ರೇಕ್ ಹಾಕಿದ್ದರೂ ಫಲ ನೀಡದೇ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿಹೊಡೆದಿದ್ದಾನೆ ಎಂದು ತಿಳಿದುಬಂದಿದೆ.ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








