ಯುವಜನ
ಎರಡು ಬೈಕ್ ಮುಖಾಮುಖಿ ಡಿಕ್ಕಿ: ಅತಿಯಾದ ವೇಗವೇ ದುರ್ಘಟನೆಗೆ ನಾಲ್ವರು ಸಾವು

Views: 104
ಕನ್ನಡ ಕರಾವಳಿ ಸುದ್ದಿ: ಜಿಲ್ಲೆಯ ಸೇಡಂ ತಾಲೂಕಿನ ಹಾಬಾಳ ಗ್ರಾಮದ ಬಳಿ ಎರಡು ಬೈಕುಗಳ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟು, ಉಳಿದಿಬ್ಬರು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಸಿದ್ದು ಕಿಷನ್ (25), ಸುರೇಶ್ ಪುಂಡರೆಡ್ಡಿ (20), ಮಲ್ಲಿಕಾರ್ಜುನ ರೇವಣಪ್ಪ ಪೂಜಾರಿ (20) ಹಾಗೂ ಪ್ರಕಾಶ್ ತಿಪ್ಪಣ್ಣ ಪೂಜಾರಿ (19) ಮೃತ ದುರ್ದೈವಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಹಾಬಾಳ ಗ್ರಾಮದಿಂದ ಬರುತ್ತಿದ್ದ ಬೈಕಿಗೆ ಸೇಡಂ ಕಡೆಯಿಂದ ಹೊರಟಿದ್ದ ಬೈಕ್ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎರಡೂ ಬೈಕುಗಳು ಸಂಪೂರ್ಣ ಛಿದ್ರಗೊಂಡಿರುವ ರೀತಿ ನೋಡಿದರೆ ಅತಿಯಾದ ವೇಗವೇ ದುರ್ಘಟನೆಗೆ ಕಾರಣ ಇರಬಹುದು ಎನ್ನಲಾಗುತ್ತಿದೆ.
ಘಟನೆಯ ಮಾಹಿತಿ ಅರಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸೇಡಂ ಠಾಣೆಯ ಪೊಲೀಸರು ಪರೀಶಿಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






