ಸಂಕ್ರಾಂತಿ ಹಬ್ಬದ ಶಾಪಿಂಗ್ಗೆ ಹೋದ ಒಂದೇ ಕುಟುಂಬದ ನಾಲ್ವರು ದುರ್ಮರಣ!

Views: 58
ಚಾಮರಾಜನಗರ: ಸಂಕ್ರಾಂತಿ ಹಬ್ಬಕ್ಕೆ ವಸ್ತುಗಳನ್ನು ಖರೀದಿ ಮಾಡಲು ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು, ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ವರದಿಯಾಗಿದೆ.
ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ನಿವಾಸಿಗಳಾದ ಸಂತೋಷ್ (32), ಅವರ ಪತ್ನಿ ಸೌಮ್ಯ (27), ಪುತ್ರಿ ನಿತ್ಯಾ ಸಾಕ್ಷಿ (4) ಮತ್ತು ಪುತ್ರ ಅಭಿಷೇಕ್ (9) ಮೃತ ದುರ್ದೈವಿಗಳಾಗಿದ್ದು, ಹಬ್ಬಕ್ಕೆ ಬೇಕಾದ ವಸ್ತುಗಳನ್ನು ತರಲು ಸಂತೋಷ್ ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಹೊಸ ಬಟ್ಟೆ ಖರೀದಿಸಲು ತನ್ನ ಬೈಕ್ನಲ್ಲಿ ಹೋಗುವಾಗ ಭತ್ತದ ಕಟಾವು ಯಂತ್ರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಜಿನಕನಹಳ್ಳಿ ರಸ್ತೆಯಲ್ಲಿ ಭತ್ತ ಕಟಾವು ಮಾಡುವ ಯಂತ್ರದ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಂತೋಷ್ ಅವರ ಪುತ್ರ ಅಭಿಷೇಕ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣವನ್ನು ಕೊಳ್ಳೆಗಾಲ ಗ್ರಾಮಾಂತರ ಪೊಲೀಸರು ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.