ಇದು ಆಕಸ್ಮಿಕ ಅವಘಡ ಅಲ್ಲ: ಪೂರ್ವಯೋಜಿತ ಕೊಲೆ ಸಂಚು, ಮೂವರ ಬಂಧನ
Views: 69
ಕನ್ನಡ ಕರಾವಳಿ ಸುದ್ದಿ: ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಿಯ ತಳಿಕುಂಬ್ರಿ ಬಸ್ ತಂಗುದಾಣದ ಬಳಿ ಕಾರೊಂದು ಬೆಂಕಿಗಾಹುತಿಯಾಗಿ ವ್ಯಕ್ತಿಯೋರ್ವ ಸಜೀವ ದಹನಗೊಂಡ ಘಟನೆ ಒಂದು ಪೂರ್ವಯೋಜಿತ ಕೊಲೆ ಸಂಚು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದ್ದು ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಿವಾಸಿ ಅಬ್ದುಲ್ ನಹೀಮ್ ಬಸೀರ ಅಹಮದ್ ಮುಜಾವರ್, ದಿವಡಗಿ ಓಣಿ ಹಳೇ ಹುಬ್ಬಳ್ಳಿ ನಿವಾಸಿ ಮೌಲಾಸಾಬ ಬಾಬಾಜಾನ ಬಾಡ ಮತ್ತು ಹಳೆ ಹುಬ್ಬಳ್ಳಿಯ ಗಾರ್ಡನ ಪೇಟೆ ನಿವಾಸಿ ದಾದಾಪೀರ್ ಯಾನೆ ಅಪ್ತಾಬ್ ಮೆಹಬೂಬ್ ಸಾಬ್ ಬಾಳಸಂಗಿ ಬಂಧಿತ ಆರೋಪಿಗಳಾಗಿದ್ದು, ಕೃತ್ಯಕ್ಕೆ ಬಳಸಿದ ಬಲೇನೊ ಕಾರ್, ಬರ್ಗಮನ್ ಮತ್ತು ಹೊಂಡಾ ಎಕ್ಟಿವಾ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಇದೇ ಏಪ್ರಿಲ್ 8 ರಂದು ಬೆಳಗಿನ ಜಾವ 5 ಗಂಟೆಯಿಂದ 7 ಗಂಟೆ ನಡುವಿನ ಅವಧಿಯಲ್ಲಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ವೋಕ್ಸ್ ವ್ಯಾಗನ್ ಕಾರು ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರುಕಲಾಗಿ ಹೋಗಿತ್ತು. ಕಾರಿನ ಚಾಲಕ ಸಹ ಯಾವದೇ ರೀತಿಯ ಗುರುತು ಸಿಗದಂತೆ ಸುಟ್ಟು ಹೋಗಿದ್ದ ಆರಂಭದಲ್ಲಿ ಆಕಸ್ಮಿಕ ತಾಂತ್ರಿಕ ದೋಷದಿಂದ ಅವಘಡ ಸಂಭವಿಸಿರಬಹುದು ಎಂದು ಪ್ರಕರಣ ದಾಖಲಿಸಿದ ಯಲ್ಲಾಪುರ ಪೊಲೀಸರು ಕಾರಿನಲ್ಲಿ ಸುಟ್ಟು ಹೋಗಿರುವ ವ್ಯಕ್ತಿಯ ಕುರಿತಂತೆ ಪತ್ತೆ ಹಚ್ಚುವ ಉದ್ದೇಶದಿಂದ ತನಿಖೆ ನಡೆಸಿದಾರೆ.






