ಪಾರ್ಟಿಯಲ್ಲಿ ಹಳೆ ದ್ವೇಷದ ಕಿಡಿ: ಗೆಳೆಯನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ!
Views: 41
ಕನ್ನಡ ಕರಾವಳಿ ಸುದ್ದಿ: ಎರಡು ವರ್ಷದ ಹಿಂದೆ ನಡೆದಿದ್ದ ಸಣ್ಣ ವಿಚಾರಕ್ಕೆ ಕಿರಿಕ್ ಆಗಿದೆ. ವಿಷಯ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಹೌದು, ಹೆಸರು ಮೋಹನ್ ಅಂತ. ತಮಿಳುನಾಡಿನ ಸಿಂಗಸಾದನಪಲ್ಲಿ ನಿವಾಸಿ. ನಿನ್ನೆ ಸಂಜೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಟ್ಟನಹಳ್ಳಿ ಬಳಿ ಸ್ನೇಹಿತ ಮನೋಜ್ ನಿಂದ ಕೊಲೆಯಾಗಿ ಹೋಗಿದ್ದಾನೆ. ನಿನ್ನೆ ಸಂಜೆ ಮೋಹನ್ ತನ್ನ ಸ್ನೇಹಿತ ಮನೋಜ್ ಜೊತೆ ಸೇರಿ ಪಾರ್ಟಿ ಮಾಡಲು ಇಲ್ಲಿಗೆ ಬಂದಿದ್ದ. ಇಬ್ಬರೂ ಕಂಠಪೂರ್ತಿ ಮದ್ಯಪಾನ ಮಾಡಿದ್ದರು. ಆದರೆ ನಶೆ ಏರುತ್ತಿದ್ದಂತೆ ಇಬ್ಬರ ನಡುವೆ ಹಳೇ ವಿಷಯವೋ ಅಥವಾ ಅಂದಿನ ಮಾತಿನ ಚಕಮಕಿಯೋ ಕಿರಿಕ್ ಶುರುವಾಗಿದೆ.ಮಾತು ಮಿತಿಮೀರಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಜಗಳ ತೀವ್ರಗೊಂಡ ಆವೇಶದಲ್ಲಿ ಮನೋಜ್ಗೆ ತನ್ನ ಸ್ನೇಹಿತನೆಂಬ ಪ್ರಜ್ಞೆಯೂ ಇರಲಿಲ್ಲ. ಅಲ್ಲೇ ಬಿದ್ದಿದ್ದ ಭಾರೀ ಗಾತ್ರದ ಕಲ್ಲನ್ನು ಎತ್ತಿ ಮೋಹನ್ ತಲೆಯ ಮೇಲೆ ಗುದ್ದಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದ ಮೋಹನ್, ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಮಟ್ಟನಹಳ್ಳಿ ಬಳಿಯ ಎಂಎಂ ಬಾರ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ನಿನ್ನೆ ಊಟ ಮಾಡಲು ಮಧು ಮತ್ತು ಮನೋಜ್ ಎಂಬುವವರು ಮೃತ ಮೋಹನ್ ನನ್ನು ಕರೆದೊಯ್ದಿದ್ದರು. ಆದ್ರೆ ಕೆಲ ಹೊತ್ತಿನಲ್ಲಿಯೇ ಕೊಲೆಯಾಗಿರುವ ವಿಚಾರ ಗ್ರಾಮಸ್ಥರ ಕಿವಿಗೆ ಬಿದ್ದಿದೆ. ಸ್ಥಳಕ್ಕೆ ಹೋದಾಗ ಮೃತ ಮೋಹನ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ಸಮೀಪದಲ್ಲಿಯೇ ರಕ್ತಸಿಕ್ತ ಸೈಜು ಕಲ್ಲು ಪತ್ತೆಯಾಗಿತ್ತು. ಕೂಡಲೇ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






