ವಿದ್ಯಾರ್ಥಿಗಳ ನಡೆಗೆ ಬೇಸತ್ತು ತಮಗೆ ತಾವೇ ಶಿಕ್ಷೆ ಕೊಟ್ಟು ಕೊಂಡ ಪ್ರಾಂಶುಪಾಲರು!

Views: 201
ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿಗಳು ಸರಿಯಾಗಿ ಕಲಿಯದಿದ್ದರೆ ಅಥವಾ ತಪ್ಪು ದಾರಿ ಹಿಡಿದಿದ್ದರೆ ಅಂತಹವರ ಕಿವಿ ಹಿಂಡಿ ಶಿಕ್ಷಕರು ಸರಿದಾರಿಗೆ ತರುತ್ತಾರೆ. ಆದರೆ, ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಗಳ ನಡೆಗೆ ಬೇಸತ್ತು ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಘಟನೆ ನಡೆದಿದ್ದು, ಸದ್ಯ ಈ ಘಟನೆ ವೈರಲ್ ಆಗಿದೆ.
ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಪೆಂಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿಗಳ ನಡೆಗೆ ಬೇಸತ್ತು ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡಿದ್ದಾರೆ. ಶಾಲೆಯ ಆವರಣದಲ್ಲಿ 50 ಬಸ್ಕಿಯನ್ನು ಹೊಡೆಯುವ ಮೂಲಕ ಪ್ರಾಂಶುಪಾಲರು ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಾಂಶುಪಾಲ ಚಿಂತಾ ರಮಣ ಅವರು ಮೊದಲಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದ್ದು, ಬಳಿಕ ನಾನು ನಿಮ್ಮನ್ನು ಬೈಯ್ಯುತ್ತಿಲ್ಲ ನಾವು ಎಷ್ಟೆಲ್ಲಾ ಪ್ರಯತ್ನ ಮಾಡಿದರೂ ನಡವಳಿಕೆ, ಶಿಕ್ಷಣಿಕ, ಬರವಣಿಗೆ ಅಥವಾ ಓದಿನಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಪೋಷಕರು ನಿಮ್ಮ ಮಕ್ಕಳ ಮೇಲೆ ನಿಗಾ ಇಡಿ ಎಂದು ಹೇಳಿ 50 ಬಸ್ಕಿಯನ್ನು ಹೊಡೆದಿದ್ದಾರೆ.