ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ!..ಮುಂಬೈ ಹಾಗೂ ಕೇರಳ ನಡುವೆ ಓಡಾಟದ ರೈಲಿಗೆ ಬೈಂದೂರು, ಕುಂದಾಪುರದಲ್ಲಿ ನಿಲುಗಡೆ.!

Views: 47
ಉಡುಪಿ: ಮುಂಬೈ ಹಾಗೂ ಕೇರಳ ನಡುವೆ ಓಡಾಟ ನಡೆಸುವ ಉಡುಪಿ ಜಿಲ್ಲೆಯ ಪ್ರಯಾಣಿಕರಿಗೆ ಸಿಹಿ ಸುದ್ದಿ. ಇಂದಿನಿಂದ 2 ರೈಲುಗಳು ಬೈಂದೂರಿನ ಮೂಕಾಂಬಿಕಾ ರೋಡ್ ನಿಲ್ದಾಣ ಹಾಗೂ ಕುಂದಾಪುರದಲ್ಲಿ ಪ್ರಾಯೋಗಿಕ ನಿಲುಗಡೆ ಹೊಂದಲಿದೆ. ಮೂಕಾಂಬಿಕಾ ರೋಡ್ ನಿಲ್ದಾಣ ಬೈಂದೂರಿನಲ್ಲಿ ಇಂದಿನಿಂದಲೇ ಈ ನಿಲುಗಡೆ ಆರಂಭವಾಗಲಿದೆ.
ಯಾವೆಲ್ಲ ರೈಲು?
ರೈಲು ಸಂಖ್ಯೆ 22630 ತಿರುನಲ್ವೇಲಿ-ದಾದರ್ ಎಕ್ಸ್ಪ್ರೆಸ್ ಮಾರ್ಚ್ 6 ರಿಂದ ಜೂನ್ 9 ರವರೆಗೆ ಮಧ್ಯರಾತ್ರಿ 12.32ಕ್ಕೆ ಬೈಂದೂರಿಗೆ ಆಗಮಿಸಿ, 12.34ಕ್ಕೆ ನಿರ್ಗಮಿಸಲಿದೆ. ಜೂನ್ 10ರಿಂದ ಮಾನ್ಸೂನ್ ಸಮಯದಲ್ಲಿ ಮಧ್ಯರಾತ್ರಿ 12.50ಕ್ಕೆ ಆಗಮಿಸಿ 12.52ಕ್ಕೆ ನಿರ್ಗಮಿಸಲಿದೆ.
ಅದೇ ರೀತಿ ರೈಲು ಸಂಖ್ಯೆ 22629 ದಾದರ್- ತಿರುನಲ್ವೇಲಿ ಎಕ್ಸ್ಪ್ರೆಸ್ ರೈಲು ಮಾರ್ಚ್ 7ರಿಂದ ಜೂನ್ 9 ರವರೆಗೆ ಬೆಳಗ್ಗೆ 10ಕ್ಕೆ ಬೈಂದೂರಿಗೆ ಆಗಮಿಸಿ 10.02ಕ್ಕೆ ನಿರ್ಗಮಿಸಲಿದೆ. ಜೂನ್ 10ರಿಂದ ಮಾನ್ಸೂನ್ ಅವಧಿಯಲ್ಲಿ ಬೆಳಗ್ಗೆ 11.56ಕ್ಕೆ ಆಗಮಿಸಿ 11.58ಕ್ಕೆ ನಿರ್ಗಮಿಸಲಿದೆ.
ಕುಂದಾಪುರದಲ್ಲೂ ನಿಲುಗಡೆ!
ಇನ್ನು ಲೋಕಮಾನ್ಯ ತಿಲಕ್- ಕೊಚ್ಚುವೇಲ್- ಲೋಕಮಾನ್ಯ ತಿಲಕ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿಗೆ ಕುಂದಾಪುರ ನಿಲ್ದಾಣದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ನಿಲುಗಡೆಯನ್ನು ನೀಡಲಾಗುತ್ತದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.
ರೈಲು ಸಂಖ್ಯೆ 22113 ಲೋಕಮಾನ್ಯ ತಿಲಕ್-ಕೊಚ್ಚುವೇಲ್ ಎಕ್ಸ್ಪ್ರೆಸ್ ಜೂನ್ 9 ರವರೆಗೆ ಬೆಳಗ್ಗೆ 8ಕ್ಕೆ ಕುಂದಾಪುರಕ್ಕೆ ಆಗಮಿಸಿ, 8:02ಕ್ಕೆ ನಿರ್ಗಮಿಸಲಿದೆ. ಜೂನ್ 10ರಿಂದ ಮಾನ್ಸೂನ್ ಸಮಯದಲ್ಲಿ ಮುಂಜಾನೆ 6ಕ್ಕೆ ಆಗಮಿಸಿ 6.02ಕ್ಕೆ ನಿರ್ಗಮಿಸಲಿದೆ.