ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ವಿವಿಧ ಸಮಿತಿ ಪದಗ್ರಹಣ ಸಮಾರಂಭ

Views: 578
ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏಪ್ರಿಲ್ 20ರಂದು ರವಿವಾರ ದೇಗುಲದ ಸಭಾಂಗಣದಲ್ಲಿ ನಡೆಯಿತು.
ದೇಗುಲದ ಆಡಳಿತ ಮೊಕ್ತೇಸರರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅಧ್ಯಕ್ಷತೆ ವಹಿಸಿ, ಎಲ್ಲಾ ಸಹ ಮೊಕ್ತೇಸರರು, ಮಾಗಣಿ ಗುರಿಕಾರರು, ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ನರವೇರಿಸಿದರು.
ನಂತರ ಅವರು ಮಾತನಾಡಿ, ಇತ್ತೀಚಿಗೆ ದೇವಸ್ಥಾನದಲ್ಲಿ ಬ್ರಹ್ಮಕಲಕೋತ್ಸವ ಮತ್ತು ದೇಗುಲದ ಸಮಗ್ರ ಅಭಿವೃದ್ಧಿಯಾಗಿದೆ.ಇದರೊಂದಿಗೆ ನೂತನವಾಗಿ ಆಯ್ಕೆಯಾದ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಾಗ ದೇವಸ್ಥಾನದ ಏಳಿಗೆಯೊಂದಿಗೆ ಸ್ವಸಮಾಜದ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದರು.
ದೇಗುಲದ ನಿಕಟಪೂರ್ವ ಆಡಳಿತ ಮೊಕ್ತೇಸರರಾದ ಡಾ.ಸಿ. ಜಯರಾಮ್ ಶೆಟ್ಟಿಗಾರ್ ಅವರು ದೇಗುಲದ ಎಲ್ಲಾ ದಾಖಲೆಗಳನ್ನು ನೂತನ ಆಡಳಿತ ಮೊಕ್ತೇಸರ ಶ್ರೀನಿವಾಸ್ ಶೆಟ್ಟಿಗಾರ್ ಅವರಿಗೆ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಸಿ. ಜಯರಾಮ ಶೆಟ್ಟಿಗಾರ, ವೀರೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ ಮಣಿಪಾಲ, ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ, ಯುವ ವೇದಿಕೆಯ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸಾಸ್ತಾನ, ಕಾರ್ಯದರ್ಶಿ ಜನಾರ್ಧನ್ ಶೆಟ್ಟಿಗಾರ ಚೇರ್ಕಾಡಿ ಉಪಸ್ಥಿತರಿದ್ದರು.
ಮೊಕ್ತೇಸರರಾದ ಶ್ರೀನಿವಾಸ್ ಶೆಟ್ಟಿಗಾರ್ ಸ್ವಾಗತಿಸಿದರು. ಸಹ ಮೊಕ್ತೇಸರರಾದ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಮಣಿಪಾಲ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜನಾರ್ಧನ್ ಶೆಟ್ಟಿಗಾರ್ ವಂದಿಸಿದರು.