ಕುಂದಾಪುರ: ಕಾಳಾವರ ಗ್ರಾಮ ಪಂಚಾಯತ್ ಎದುರು ಬಿಜೆಪಿ ಪಕ್ಷ ಹಾಗೂ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನಾ ಸಭೆ
"ಕಾಂಗ್ರೆಸ್ ಸರಕಾರ ಜನರ ಪರ ಇದ್ದು, ಬಿಜೆಪಿಯ ಸುಳ್ಳಿನ ವಿರುದ್ದ ಜನರನ್ನು ಎಚ್ಚರಿಸಲು ಸತ್ಯದರ್ಶನ ಸಭೆಯನ್ನು ಪ್ರತಿ ಗ್ರಾಮಪಂಚಾಯತ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರಕಾರ ಅದನ್ನು ಸರಿಪಡಿಸುವಲ್ಲಿ ಕ್ರಮವಹಿಸುತ್ತಿದೆ"---- ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ

Views: 218
ಕನ್ನಡ ಕರಾವಳಿ ಸುದ್ದಿ: ಗ್ರಾಮಪಂಚಾಯತ್ ಗಳಲ್ಲಿ 25 ಸೆಂಟ್ಸ್ ಗಿಂತ ಕಡಿಮೆ ಇರುವ ಭೂಮಿಗಳಿಗೆ 9 & 11 ಇ ವಿನ್ಯಾಸ ನಕ್ಷೆಗೆ ಅನುಮೋದನೆ ದೊರೆಯುತ್ತಿತ್ತು ಆದರೆ 2022 ರಲ್ಲಿ ಬಿಜೆಪಿ ಸರಕಾರ ಅದನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಅಗತ್ಯ ಎಂದು ಆದೇಶ ಹೊರಡಿಸಿತ್ತು, ಆದರೆ ಈಗ ಅದನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಜನರನ್ನು ನಂಬಿಸುವ ಹುನ್ನಾರ ಮಾಡುತ್ತಿದೆ.
ಬಡವರ ಸಂಧ್ಯಾ ಸುರಕ್ಷಾ, ವೃಧ್ದಾಪ್ಯ ವೇತನಗಳ ಪರಿಷ್ಕರಣೆ ಮಾಡಬೇಕು ಎಂದು ಬಿಜೆಪಿ ಸರಕಾರವೇ ಆದೇಶ ಹೊರಡಿಸಿದ್ದು ಆದರೆ ಕಾಂಗ್ರೆಸ್ ಸರಕಾರ ಅದನ್ನು ರದ್ದು ಮಾಡುತ್ತದೆ ಎಂದು ಅಮಾಯಕರ ಮನಸ್ಸಲ್ಲಿ ಸುಳ್ಳನ್ನು ಬಿತ್ತುತ್ತಿದೆ.
ಅಕ್ರಮ ಸಕ್ರಮ ಮಂಜೂರಾತಿಗಾಗಿ ಆ್ಯಪ್ ಮೂಲಕ ಅವೈಜ್ಞಾನಿಕ ಸರ್ವೆಗೆ ಆದೇಶ ಮಾಡಿ, ಅಕ್ರಮ ಸಕ್ರಮದಡಿ ಭೂಮಿ ಮಂಜೂರಾಗದಂತೆ ಮಾಡಿದ್ದು ಬಿಜೆಪಿ ಸರಕಾರದ ಅವಧಿಯಲ್ಲಿ , ಆದರೆ ಏನೂ ತಿಳಿಯದಂತೆ ಇಂದು ಬಿಜೆಪಿ ನಾಟಕ ಮಾಡುತ್ತಿದೆ.
ಈ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಜನರ ಪರ ಇದ್ದು, ಬಿಜೆಪಿಯ ಸುಳ್ಳಿನ ವಿರುದ್ದ ಜನರನ್ನು ಎಚ್ಚರಿಸಲು ಸತ್ಯದರ್ಶನ ಸಭೆಯನ್ನು ಪ್ರತಿ ಗ್ರಾಮಪಂಚಾಯತ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರಕಾರ ಅದನ್ನು ಸರಿಪಡಿಸುವಲ್ಲಿ ಕ್ರಮವಹಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ದಾಖಲೆ ಸಮೇತ ವಿವರಿಸಿದರು.
ಗ್ರಾಮ ಸರಕಾರದಲ್ಲಿ ಜನರಿಗೆ ನೇರ ಉಪಯೋಗ ಆಗುವ ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಉದ್ಯೋಗ ಖಾತ್ರಿ ( ನರೇಗಾ ) ಯೋಜನೆಯನ್ನು ಇಂದಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಳ್ಳ ಹಿಡಿಸುವ ಕಾರ್ಯ ಮಾಡುತ್ತಿದೆ.
ಜನರ ವಯಕ್ತಿಕ ಕೆಲಸಗಳಾದ ಬಾವಿ ನಿರ್ಮಾಣ, ದನದ ಕೊಟ್ಟಿಗೆ ರಚನೆ, ಗೊಬ್ಬರ ಗುಂಡಿ, ಕೋಳಿ ಶೆಡ್, ವಸತಿ ಮನೆ, ಇಂಗು ಗುಂಡಿ ಇತ್ಯಾದಿಗಳನ್ನು ನರೇಗಾ ಅನುದಾನದಲ್ಲಿ ಸುಲಭವಾಗಿ ನಿರ್ಮಿಸುತ್ತಿದ್ದರು. ಆದರೆ ಈಗ ಹಲವಾರು ನೀತಿ ನಿಯಮಗಳನ್ನು ಹೇರಿ ಅದರ ಉಪಯೋಗ ಯಾರಿಗೂ ಸಿಗದಂತೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಕೂಲಿ ಮತ್ತು ಕಚ್ಚಾ ಸಾಮಗ್ರಿ ಹಣಕ್ಕಾಗಿ ಜನರು ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.ಸಾರ್ವಜನಿಕ ಕಾಮಗಾರಿ ಮಾಡಲು ಸಾಧ್ಯ ಇಲ್ಲದ ಪರಿಸ್ಥಿತಿ ಬಂದಿದೆ. ಕೇಂದ್ರ ಸರಕಾರದಿಂದ ಗ್ರಾಮಪಂಚಾಯತ್ ಗಳಿಗೆ ದೊರಕುತ್ತಿದ್ದ 15 ನೇ ಹಣಕಾಸು ಯೋಜನೆಯ ಹಣವನ್ನು ಆರು ವರ್ಷಗಳ ಹಿಂದೆ ಕೋವಿಡ್ ಕಾರಣದಲ್ಲಿ ಶೇ.30 ಕಡಿತಮಾಡಿದ್ದರು.
ಅದು ಈಗಲೂ ಕಡಿತಗೊಂಡೇ ಬರುತ್ತಿದ್ದು ಪ್ರತೀ ಗ್ರಾಮಪಂಚಾಯತ್ ಗಳ ಅನುದಾನದಲ್ಲಿ ಪ್ರತಿ ವರ್ಷ ಕೇಂದ್ರ ಸರಕಾರ ಲೂಟಿ ಹೊಡೆಯುತ್ತಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಆಗದೇ ಇರುವ ನೆಪ ಒಡ್ಡಿ ಅಲ್ಲಿನ ಅನುದಾನವನ್ನೂ ನಿಲ್ಲಿಸಿ ಆ ಹಣವನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಕಾಳಾವರದ ಗ್ರಾಮಪಂಚಾಯತ್ ನ ಹಿರಿಯ ಸದಸ್ಯ ರಾಮಚಂದ್ರ ನಾವಡ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯಿಂದ ಜನರು ಪೆಟ್ರೋಲ್ , ಡಿಸೇಲ್ , ಬೇಳೆ ಕಾಳುಗಳು, ಅಡುಗೆ ಎಣ್ಣೆಗಳನ್ನು ಕೊಳ್ಳುವ ಸಾಮರ್ಥ ಕಳೆದುಕೊಂಡಿದ್ದಾರೆ. ಪ್ರತಿಯೊಂದು ವಸ್ತುವಿನ ಮೇಲೆ ಕೇಂದ್ರ ಸರಕಾರ ವಿಧಿಸುವ ಜಿಎಸ್ ಟಿ ಟ್ಯಾಕ್ಸ್ ನಿಂದಾಗಿ ಜನರ ಜೀವನದ ಮೇಲೆ ಹೊಡೆತ ಬಿದ್ದಿದೆ. ಜನರ ಜೀವನವು ಕಾಂಗ್ರೆಸ್ ಸರಕಾರ ನೀಡುತ್ತಿರುವ ಪಂಚ ಗ್ಯಾರಂಟಿಗಳಿಂದ ಸಲ್ಪ ಸುಧಾರಿಸಿದೆ.ಆದರೆ ಬಿಜೆಪಿ ಸರಕಾರವು ಜನರನ್ನು ಬೇರೆ ವಿಷಯಗಳಿಂದ ಎತ್ತಿಗಟ್ಟಿ ಗ್ಯಾರಂಟಿಗಳನ್ನು ನಿಲ್ಲಿಸಲು ಹುನ್ನಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಯಾಡಿ ಶಿವರಾಮ್ ಶೆಟ್ಟಿಯವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಮಾತನಾಡಿ, ಸದಾ ಜನ ಪರ ಆಗಿರುವ ಕಾಂಗ್ರೆಸ್ ಪಕ್ಷ ಜನರಿಗಾಗಿಯೇ ಹಿಂದೆ ಕೂಡಾ ಆಡಳಿತ ನಡೆಸಿದೆ, ಇಂದೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ, ಮುಂದೆಯೂ ನಡೆಸುತ್ತದೆ ಎಂದರು.
ಜನ ವಿರೋಧಿ ನೀತಿ ಅನುಸರಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.
ಪ್ರತಿಭಟನಾ ಸಭೆಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿಗಾರ್, ಉಪಾಧ್ಯಕ್ಷರಾದ ಪಾರ್ವತಿ ಶೇರಿಗಾರ್, ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಭಿಜಿತ್ ಪೂಜಾರಿ, ಹಿರಿಯ ಕಾಂಗ್ರೆಸ್ ಮುಖಂಡರಾದ ಅಜಿತ್ ಶೆಟ್ಟಿ ಅಸೋಡು, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರಕ್ಷಿತ್ ಶೆಟ್ಟಿ ಕಾಳಾವರ, ಭರತ್ ಕುಮಾರ್ ಶೆಟ್ಟಿ ಕಾಳಾವರ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.