ಕಸ ಹಾಕಿ ಬರುತ್ತೇನೆ ಎಂದು ಎರಡು ಮಕ್ಕಳ ತಾಯಿ ಪ್ರಿಯಕರನ ಜೊತೆ ಪರಾರಿ!
Views: 106
ಕನ್ನಡ ಕರಾವಳಿ ಸುದ್ದಿ: ಕಸ ಹಾಕಿ ಬರುತ್ತೇನೆ ಎಂದು ಮನೆಯಿಂದ ಹೊರಹೋದ ಇಬ್ಬರು ಮಕ್ಕಳ ತಾಯಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಯು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ ಎಂದು ಪತಿ ಗಂಭೀರ ಆರೋಪ ಮಾಡಿದ್ದು, ಸದ್ಯ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ.
ಬಾಗಲಗುಂಟೆಯಲ್ಲಿ ವಾಸವಿದ್ದ ಶರತ್ ಕುಮಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶರತ್ ಕೆಲಸಕ್ಕೆ ಹೋದ ಸಮಯದಲ್ಲಿ ಅದೇ ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನ ಜೊತೆ ಮಹಿಳೆ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಪ್ರಭು ಮಹಿಳೆಯ ಮೊಬೈಲ್ ರೀಚಾರ್ಜ್ ಮಾಡಿಸುತ್ತಿದ್ದ ವಿಷಯ ತಿಳಿದು ದಂಪತಿ ನಡುವೆ ಈ ಹಿಂದೆ ಗಲಾಟೆಯೂ ನಡೆದಿತ್ತು. ಪತಿ ಶರತ್ ಈ ಬಗ್ಗೆ ಪತ್ನಿಗೆ ಬುದ್ಧಿವಾದ ಹೇಳಿದ್ದರು.
ಏಪ್ರಿಲ್ 11ರ ರಾತ್ರಿ ಸುಮಾರು 11:57ಕ್ಕೆ ಮಹಿಳೆ ಮನೆ ಬಿಟ್ಟು ಹೋಗಿದ್ದಾಳೆ. ಹೋಗುವ ಮುನ್ನ ಪತಿ ಮತ್ತು ಮಕ್ಕಳಿಗೆ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದಳು ಎಂಬ ಗಂಭೀರ ಆರೋಪವನ್ನು ಪತಿ ಶರತ್ ಮಾಡಿದ್ದಾರೆ. ‘ನಾನು ಮನೆಯಲ್ಲಿದ್ದಾಗಲೇ ಒಂದು ಕೈಯಲ್ಲಿ ಕಸದ ಬಕೆಟ್ ಹಾಗೂ ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಪ್ರಿಯಕರನ ಜೊತೆ ಹೋಗಿದ್ದಾಳೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.






