ಪ್ರಿಯಕರನ ಜೊತೆ ಓಡಿಹೋದ ಯುವತಿಗೆ ವಿಷ ನೀಡಿ ಕೊಲೆ
Views: 44
ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಪ್ರಿಯಕರನೊಂದಿಗೆ ಓಡಿಹೋದ ಹಿನ್ನೆಲೆಯಲ್ಲಿ ಯುವತಿಯನ್ನು ಸಂಬಂಧಿಕರೇ ವಿಷ ನೀಡಿ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಡೆದಿದೆ.
ಸತ್ಯವ್ವ ಎಂಬ ಯುವತಿ ಫೆಬ್ರವರಿ 17ರಂದು ತನ್ನ ಪ್ರಿಯಕರ ಕೃಷ್ಣ ಪಾಟೀಲ್ ಜೊತೆ ಮನೆಬಿಟ್ಟು ಓಡಿ ಹೋಗಿದ್ದಳು. ನಂತರ ಇಬ್ಬರೂ ಸೌದತ್ತಿ ತಾಲೂಕಿನ ಬೆಳವಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸುಮಾರು 15 ದಿನಗಳ ಬಳಿಕ ಕುಟುಂಬಸ್ಥರು ಇಬ್ಬರನ್ನೂ ಕರೆತಂದು ರಾಜಿ ಸಂಧಾನ ನಡೆಸಿದ್ದರು.
ಇದಾದ ಬಳಿಕ ಸತ್ಯವ್ವಳ ಅಣ್ಣ ಶಾನೂರ ಆಕೆಯನ್ನು ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಿದ್ದನು. ಈ ವೇಳೆ ಪ್ರಿಯಕರನನ್ನು ಮರೆತು ಬಿಡುವಂತೆ ಕುಟುಂಬಸ್ಥರು ಒತ್ತಡ ಹೇರಿದ್ದರು. ಆದರೆ ಇದಕ್ಕೆ ಆಕೆ ಒಪ್ಪದ ಹಿನ್ನೆಲೆಯಲ್ಲಿ ಕೊಲೆ ಮಾಡಲು ಸಂಚು ರೂಪಿಸಲಾಗಿದೆ.
ಮಾರ್ಚ್ 21ರಂದು ಅರಗ ಗ್ರಾಮಕ್ಕೆ ಕರೆದುಕೊಂಡು ಬಂದು ಸತ್ಯವ್ವಳಿಗೆ ವಿಷ ಕುಡಿಸಿ ಹತ್ಯೆಗೈದಿದ್ದಾರೆ. ಬಳಿಕ ಸಾಕ್ಷಿ ನಾಶಪಡಿಸಲು ಶವವನ್ನು ಹಾಸಿಗೆ ಬಟ್ಟೆ ಸಮೇತ ಸುಟ್ಟು ಹಾಕಲಾಗಿದೆ. ಶವವನ್ನು ಮಹಾರಾಷ್ಟ್ರದಲ್ಲೇ ಸುಟ್ಟು ಆರೋಪಿಗಳು ಊರಿಗೆ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಸತ್ಯವ್ವ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಪ್ರಿಯಕರ ಕೃಷ್ಣ ಪಾಟೀಲ್ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ದೂರಿನ ಮೇರೆಗೆ ಸಿಪಿಐ ಜಾವೇದ್ ಮುಶಪೂರಿ ತನಿಖೆ ಕೈಗೊಂಡು, ಶಾನೂರನನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬಹಿರಂಗವಾಗಿದೆ. “ತಂಗಿ ಕುಟುಂಬದ ಮರ್ಯಾದೆ ಹಾಳುಮಾಡಿದ್ದಾಳೆ” ಎಂಬ ಕಾರಣ ನೀಡಿ ಕೊಲೆಗೈದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಪ್ರಕರಣ ಸಂಬಂಧ ಶಾನೂರ, ಪ್ರಕಾಶ ಮತ್ತು ಕಲ್ಲಪ್ಪರನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರೆದಿದೆ.






